ಕಾವಳಕಟ್ಟೆ: ಹಿದಾಯ ಕಾಲನಿಗೆ ನ್ಯಾ.ಸಂತೋಷ್ ಹೆಗ್ಡೆ ಭೇಟಿ
ಬಂಟ್ವಾಳ, ಡಿ.26: ಮಂಗಳೂರು ಹಿದಾಯ ಫೌಂಡೇಶನ್ ವತಿಯಿಂದ ಕಾವಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯ ಶೇರ್ ಆ್ಯಂಡ್ ಕೇರ್ ಕಾಲನಿಗೆ ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಎನ್.ಸಂತೋಷ್ ಹೆಗ್ಡೆ ಸೋಮವಾರ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ವಸತಿ, ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಹಿದಾಯ ಫೌಂಡೇಶನ್ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಸಮಾನತೆ ಕಂಡುಕೊಳ್ಳುವಲ್ಲಿ ಸಮುದಾಯ ಶ್ರಮಿಸಿದರೆ ದೇವರ ಪ್ರೀತಿಗೆ ಪಾತ್ರರಾಗಬಹುದು ಎಂದು ಅಭಿಪ್ರಾಯಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿದಾಯ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಮಾತನಾಡಿ, ಸರಳ ವ್ಯಕ್ತಿತ್ವ ಮೈಗೂಡಿಸಿರುವ ಸಂತೋಷ್ ಹೆಗ್ಡೆ ಸ್ಫೂರ್ತಿದಾಯಕ ವ್ಯಕ್ತಿ ಎಂದರು.
ಹಿದಾಯ ಫೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಂ. ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಹಿದಾಯ ಸದಸ್ಯರಾದ ಬೆಳ್ಳಿಚಾರ್ಮುಹಮದ್, ಕೆ.ಎಸ್.ಅಬೂಬಕರ್, ರಶೀದ್ ಕಕ್ಕಿಂಜೆ, ಹಸನ್, ಕಾಲನಿ ಮ್ಯಾನೇಜರ್ ಝಹೀರ್, ಲೆಕ್ಕ ಪರಿಶೋಧಕ ಜಸೀಮ್, ಶಹೀಮ್, ವಿಕಲಚೇತನ ಶಾಲೆಯ ಮುಖ್ಯಶಿಕ್ಷಕಿ ಪ್ರೇಮಾ ಉಪಸ್ಥಿತರಿದ್ದರು.
ಹಿದಾಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಹಿದಾಯ ಆಡಳಿತಾಧಿಕಾರಿ ಆಬಿದ್ ಅಸ್ಗರ್ ವಂದಿಸಿದರು.