ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರಿಗೆ ಗಾಯ
ಉಪ್ಪಿನಂಗಡಿ, ಜ.7: ಕಾರೊಂದಕ್ಕೆ ಹಾಲಿನ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ಶನಿವಾರ ನಡೆದಿದೆ.
ಶೃಂಗೇರಿ ತಾಲೂಕಿನ ಕೊಪ್ಪದ ಹಿಮ್ಮರಹಳ್ಳಿ ನಿವಾಸಿಗಳಾದ ಶಂಕರಪ್ಪ(60), ಅವರ ಪತ್ನಿ ಕಮಲಾಕ್ಷಿ(55), ಮಗ ಶಶಿಕುಮಾರ(26) ಹಾಗೂ ಸೊಸೆ ಸುಷ್ಮಿತಾ(21) ಗಾಯಗೊಂಡವರು. ಶಂಕರಪ್ಪ ಕಳೆದ 1 ವರ್ಷದಿಂದ ಪುತ್ತೂರಿನ ವೈದ್ಯರೋರ್ವರಿಂದ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಕೂಡಾ ಬೆಳಗ್ಗೆ ಮನೆಯಿಂದ ಕಾರಿನಲ್ಲಿ ಕುಟುಂಬ ಸಮೇತರಾಗಿ ಪುತ್ತೂರಿಗೆ ಹೊರಟಿದ್ದರು. ಆದರೆ ಕರಾಯ ಗ್ರಾಮದ ಕೊಲ್ಲಿ ಎಂಬಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಹಾಲಿನ ಟ್ಯಾಂಕರೊಂದು ಮುಖಾಮುಖಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲಿ ಸಂಪೂರ್ಣವಾಗಿ ತಿರುಗಿದೆ. ಹಾಲಿನ ಟ್ಯಾಂಕರನ್ನು ಚಂದ್ರಶೇಖರ್ ಎಂಬವರು ಚಲಾಯಿಸುತ್ತಿದ್ದರು. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಶಂಕರಪ್ಪ ಹಾಗೂ ಸುಷ್ಮಿತಾ ಅವರ ಸ್ಥಿತಿ ಗಂಭೀರವಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.