ಅತ್ತೂರು ಚರ್ಚ್ನ ನೊವೆನಾ ಕಾರ್ಯಕ್ರಮಕ್ಕೆ ಚಾಲನೆ
ಕಾರ್ಕಳ, ಜ.15: ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಒಂಬತ್ತು ದಿನಗಳ ನೊವೆನಾ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಗೋಪಾಲ ಭಂಡಾರಿ ನೊವೆನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಾಸಿಲಿಕಾದ ರೆಕ್ಟರ್ ವಂ.ಜೋರ್ಜ್ ಡಿಸೋಜ, ಸಹಾಯಕ ಧರ್ಮ ಗುರು ವಂ.ವಿಜಯ್ ಡಿಸೋಜ, ಉಡುಪಿ ಧರ್ಮಪ್ರಾಂತದ ಆಧ್ಯಾತ್ಮಿಕ ಆಯೋಗದ ನಿರ್ದೇಶಕ ವಂ.ಸ್ಟೀಫನ್ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರಿಚಾರ್ಡ್ ಪಿಂಟೊ, ಕಾರ್ಯದರ್ಶಿ ಸಂತೋಷ್ ಡಿಸಿಲ್ವಾ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಜಾರ್ಜ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.
ವಾರ್ಷಿಕ ಜಾತ್ರಾ ಮಹೋತ್ಸವ ಜ.22ರಿಂದ ಆರಂಭಗೊಂಡು 26ರ ತನಕ ನಡೆಯಲಿದೆ. ಜ.22ರಂದು ಬೆಳಗ್ಗೆ 7:30ಕ್ಕೆ ಪವಿತ್ರ ಬಲಿಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಸೋಮವಾರ ವ್ಯಾಧಿಸ್ಟರಿಗಾಗಿ ವಿಶೇಷ ಬಲಿಪೂಜೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸುಮಾರು 43 ಬಲಿಪೂಜೆಗಳು ಕನ್ನಡ, ಇಂಗ್ಲಿಷ್, ಮಲಯಾಳಂ ಹಾಗೂ ಕೊಂಕಣಿ ಭಾಷೆಯಲ್ಲಿ ಜರಗಲಿದೆ.