23ರಂದು ನಿರ್ವಸಿತ ಕೊರಗರಿಂದ ಧರಣಿ
ಮಂಗಳೂರು, ಜ. 17: ಹೆದ್ದಾರಿ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ವಸಿತರಾಗಿರುವ ಕೊರಗ ಕುಟುಂಬಗಳಿಗೆ ನೀಡಲಾಗಿರುವ ಪದವು ಸರಿಪಳ್ಳದ ನಿವೇಶನವನ್ನು ಸಮತಟ್ಟುಗೊಳಿಸಬೇಕು ಹಾಗೂ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಜ.23ರಂದು ಮಂಗಳೂರು ಮಹಾನಗರ ಪಾಲಿಕೆಯ ಎದುರು ಪ್ರತಿಭಟನಾ ಧರಣಿ ನಡೆಸಲು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮಂಗಳೂರು ಘಟಕ ನಿರ್ಧರಿಸಿದೆ.
ಕಳೆದ ಒಂದು ವರ್ಷದಿಂದ ಹಕ್ಕುಪತ್ರ ನೀಡಲಾಗಿರುವ ಭೂಮಿಯು ಮುರಕಲ್ಲುಗಳಿಂದ ಕೂಡಿದ್ದು ಎತ್ತರ ತಗ್ಗುಗಳಿಂದ ಕೂಡಿದೆ. ಇಲ್ಲಿ ಮನೆ ನಿರ್ಮಿಸಬೇಕಾದರೆ ಐಟಿಡಿಪಿ ಕೊಡುವ 2ಲಕ್ಷ ರೂಪಾಯಿ ಕೇವಲ ನೆಲವನ್ನು ಸಮತಟ್ಟುಗೊಳಿಸಲಿಕ್ಕಾಗಿಯೇ ಕೊಡಬೇಕಾಗುತ್ತದೆ. ಆದುದರಿಂದ ಮ.ನ.ಪಾ ಇದನ್ನು ಸಮತಟ್ಟುಗೊಳಿಸಿ ನೀರಿನ ಪೈಪ್ ಅಳವಡಿಸಬೇಕೆಂದು ಮನವಿ ಅರ್ಪಿಸಿ ಒಂದು ವರ್ಷ ಕಳೆದರೂ ಕಾಮಗಾರಿ ಪ್ರಾರಂಭಿಸಿರುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಐಟಿಡಿಪಿ ಇಲಾಖೆಯನ್ನು ಪ್ರತ್ಯೇಕ ಮನವಿ ಅರ್ಪಿಸಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಘಟಕದ ಕಾರ್ಯದರ್ಶಿ ಶಶಿಕಲಾ ಎನ್. ಹೇಳಿಕೆಯಲ್ಲಿ ತಿಳಿಸಿದ್ದಾರೆ.