‘ಜೋಗಿಮಠ ರಸ್ತೆಯ ನಾಮಫಲಕ ಅಳವಡಿಸಿ’
ಮಂಗಳೂರು, ಜ.17: ಸರ್ಕ್ಯೂಟ್ ಹೌಸ್ ಮುಂಭಾಗದ ವೃತ್ತದ ಬಳಿಯಿದ್ದ ‘ಜೋಗಿ ಮಠ ರಸ್ತೆ’ಯ ನಾಮಫಲಕವನ್ನು ಮನಪಾ ವಿಪಕ್ಷವು ಜ.12ರಂದು ಕಿತ್ತು ಹಾಕಿ ‘ವಿವೇಕಾನಂದ ರಸ್ತೆ’ ಎಂದು ನಾಮಫಲಕ ಅಳವಡಿಸಿರುವುದು ಖಂಡನೀಯ. ಇದು ಜೋಗಿ ಸಮಾಜಕ್ಕೆ ಮತ್ತು ಮಠಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ದ.ಕ.ಜೋಗಿ ಸಮಾಜ ಸುಧಾರಕ ಮಾತೃ ಸಂಘದ ಅಧ್ಯಕ್ಷ ಕೆ. ಅಶೋಕ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೂರ್ವ ಜರ ಕಾಲದಿಂದಲೂ ಈ ರಸ್ತೆಗೆ ‘ಜೋಗಿಮಠ ರಸ್ತೆ’ ಎಂದೇ ನಾಮಕರಣ ಮಾಡ ಲಾಗಿದೆ. ಹೀಗಿರುವಾಗ ಈ ರಸ್ತೆಯ ನಾಮಫಲಕವನ್ನು ಕಿತ್ತು ವಿವೇಕಾನಂದ ರಸ್ತೆ ಎಂದು ನಾಮಕರಣ ಮಾಡಿರುವುದು ಸರಿಯಲ್ಲ. ಸ್ವಾಮಿ ವಿವೇಕಾನಂದರ ಬಗ್ಗೆ ಜೋಗಿ ಸಮಾಜಕ್ಕೆ ಅಭಿಮಾನವಿದೆ. ಹಿಂದಿನಿಂದಲೂ ನಂತೂರು ವೃತ್ತದಿಂದ ಪದುವಾ ಶಾಲೆಗೆ ತೆರಳುವ ರಸ್ತೆಗೆ ‘ವಿವೇಕಾನಂದ ರಸ್ತೆ’ ಎಂದು ಹೆಸರಿಡಲಾಗಿದೆ. ಅಲ್ಲದೆ ಈ ರಸ್ತೆಯ ಒಂದು ಬದಿಯ 5 ತಿರುವುಗಳಿಗೆ ವಿವೇಕಾನಂದ ಅಡ್ಡ ರಸ್ತೆ ಎಂದು ಬದಲಾಯಿಸಲಾಗಿದೆ. ಹೀಗಿರುವಾಗ ಜೋಗಿಮಠ ರಸ್ತೆಯ ನಾಮ ಫಲಕವನ್ನು ಕಿತ್ತು ವಿವೇಕಾನಂದ ರಸ್ತೆ ಎಂಬ ನಾಮಫಲಕ ಅಳವಡಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಹರೀಶ್ ಎಸ್., ಕೆ.ವಿಶ್ವನಾಥ, ಸತೀಶ್ ಕುಮಾರ್ ಜೋಗಿ, ಸದಾನಂದ ಜೋಗಿ ಉಪಸ್ಥಿತರಿದ್ದರು.