ನಾಳೆ ಉಡುಪಿಗೆ ಮಂಗಲ ಗೋಯಾತ್ರೆ
ಉಡುಪಿ, ಜ.18: ಗೋವಂಶಗಳ ಸಂರಕ್ಷಣೆ ಹಾಗೂ ಗೋವುಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡಿರುವ ಮಂಗಲ ಗೋಯಾತ್ರೆ ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಸುತ್ತಿ ಜ.20ರಂದು ಉಡುಪಿ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ಪರ್ಯಾಯ ಪೇಜಾವರ ಮಠಾೀಶ ಶ್ರೀವಿಶ್ವೇಶತೀರ್ಥರು ಸುದ್ದಿಗೋಷ್ಠಿಯಲ್ಲಿಂದು ಹೇಳಿದ್ದಾರೆ.
ಅಂದು ಬೆಳಗ್ಗೆ ಶೀರೂರು ಮೂಲಕ ಉಡುಪಿ ಜಿಲ್ಲೆಗೆ ಬರುವ ಮಂಗಲ ಗೋಯಾತ್ರೆ ಅಪರಾಹ್ನ 3ಕ್ಕೆ ಜೋಡುಕಟ್ಟೆಯಿಂದ ಶೋಭಾಯಾತ್ರೆ ಹೊರಡಲಿದೆ. ಸಂಜೆ 4:30ಕ್ಕೆ ಶ್ರೀಕೃಷ್ಣ ಮಠದ ಎದುರು ಸ್ವಾಗತಿಸಲಾಗುವುದು ಎಂದರು. ಬಳಿಕ ರಾಜಾಂಗಣದಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಅಷ್ಟಮಠಾೀಶರು ಭಾಗವಹಿಸಲಿದ್ದಾರೆ ಎಂದರು. ಗೋಯಾತ್ರೆಯ ಮಹಾಮಂಗಲ ಜ.27ರಿಂದ 29ರವರೆಗೆ ಮಂಗಳೂರಿನ ಕೂಳೂರಿನಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಚಂದ್ರ ಸ್ವಾಮೀಜಿ, ಎ.ಜಿ. ಕೊಡ್ಗಿ, ಡಾ.ಎಸ್.ಎಲ್.ಕರಣಿಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕೃಷ್ಣರಾಜ ಸರಳಾಯ, ಡಾ.ಪಾದೇಕಲ್ಲು ವಿಷ್ಣು ಭಟ್ ಉಪಸ್ಥಿತರಿದ್ದರು.