ಮನೆಗೆ ನುಗ್ಗಿ ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಲೆ
ಆರೆಸ್ಸೆಸ್ ಕಾರ್ಯಾಲಯದ ಮೇಲೆ ನಾಡ ಬಾಂಬ್ ಎಸೆತ
ಕಾಸರಗೋಡು, ಜ.19: ಮಾರಕಾಯುಧಗಳೊಂದಿಗೆ ಮನೆಯೊಂದಕ್ಕೆ ನುಗ್ಗಿದ ತಂಡವೊಂದು ಬಿಜೆಪಿ ಕಾರ್ಯಕರ್ತರೊಬ್ಬರನ್ನು ಭೀಕರವಾಗಿ ಕೊಚ್ಚಿ ಹತ್ಯೆಗೈದ ಘಟನೆ ಕಣ್ಣೂರು ಧರ್ಮಡಂ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಧರ್ಮಡಂ ಅಂಡಲ್ಲೂರು ಎಂಬಲ್ಲಿನ ಸಂತೋಷ್(52) ಕೊಲೆಗೀಡಾದವರು. ಕಳೆದ ರಾತ್ರಿ 11:30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಮಾರಕಾಯುಧಗಳೊಂದಿಗೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ಪಾರಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಸಂತೋಷ್ರನ್ನು ತಕ್ಷಣ ತಲಶ್ಯೇರಿಯಲ್ಲಿರುವ ಸಹಕಾರಿ ಆಸ್ಪತ್ರೆಗೆ ತಲಪಿಸಿದರು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಕೃತ್ಯ ನಡೆಯುವ ಸಂದರ್ಭದಲ್ಲಿ ಸಂತೋಷ್ ಒಬ್ಬರೇ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.
*ಇಂದು ಕಣ್ಣೂರು ಜಿಲ್ಲೆ ಬಂದ್
ಸಂತೋಷ್ರ ಕೊಲೆ ಕೃತ್ಯವನ್ನು ಖಂಡಿಸಿ ಬಿಜೆಪಿ ಗುರುವಾರ ಕಣ್ಣೂರು ಜಿಲ್ಲೆಯಲ್ಲಿ ಬಂದ್ಗೆ ಕರೆ ನೀಡಿದೆ. ಇದೇ ಸಂದರ್ಭ ಇಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ.
ಹತ್ಯೆ ಹಾಗೂ ಬಂದ್ ಹಿನ್ನಲೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಬಸ್ ಸೇರಿದಂತೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿವೆ.
ಈ ನಡುವೆ ತಳಿಪರಂಬದಲ್ಲಿ ಆರೆಸ್ಸೆಸ್ ಕಾರ್ಯಾಲಯದ ಮೇಲೆ ಇಂದು ಮುಂಜಾನೆ ನಾಡ ಬಾಂಬೆಸೆಯಲಾಗಿದೆ. ಇದರಿಂದ ಕಚೇರಿಯೊಳಗೆ ಇದ್ದ ಪೀಠೋಪಕರಣ ಹಾಗೂ ಇನ್ನಿತರ ಸಾಮಗ್ರಿಗಳಿಗೆ ಹಾನಿ ಉಂಟಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ ಎಂದು ತಿಳಿದುಬಂದಿದೆ.