ಮದುವೆಗೆ ನಕಾರ: ಯುವತಿಯ ತಾಯಿಗೆ ಹಲ್ಲೆ
ಕುಂದಾಪುರ, ಜ.23: ಮದುವೆಯಾಗುವಂತೆ ಯುವತಿಯೊಬ್ಬಳನ್ನು ಪೀಡಿ ಸುತ್ತಿದ್ದ ಯುವಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುವತಿಯ ತಾಯಿಗೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಕುಂದಾಪುರದಲ್ಲಿ ಇಂದು ನಡೆದಿದೆ.
ಹಲ್ಲೆಗೆ ಒಳಗಾದ ದತ್ತಾತ್ರೇಯ ಅಪಾರ್ಟ್ಮೆಂಟ್ನ ನಿವಾಸಿ ಸುಜಾತ (42) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಅದೇ ಅಪಾರ್ಟ್ ಮೆಂಟ್ನ ನಿವಾಸಿ ನಿತಿನ್(28) ಎಂಬಾತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿತಿನ್ ಮೂರು ನಾಲ್ಕು ವರ್ಷಗಳಿಂದ ಸುಜಾತರ ಮಗಳಿಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದು, ಇಂದು ಫ್ಲಾಟ್ನ ಲಿಫ್ಟ್ನಲ್ಲಿ ತಮ್ಮ ಮನೆಗೆ ಹೋಗುತ್ತಿದ್ದ ಸುಜಾತ ಹಾಗೂ ಅವರ ಮಗಳನ್ನು ಹೊರಗೆಳೆದ ನಿತಿನ್ ಸುಜಾತರಿಗೆ ಕಲ್ಲು, ರಾಡ್ನಿಂದ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಸುಜಾತ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರ ಅಧ್ಯಕ್ಷೆ ರಾಧಾದಾಸ್, ಗಾಣಿಗ ಸೇವಾ ಸಮಿತಿ ಕಾರ್ಯದರ್ಶಿ ಶಿವಾನಂದ ರಾವ್ ಗಂಗೊಳ್ಳಿ, ಗಾಣಿಗ ಯುವ ಸಂಘಟನೆ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ನಾಗರಾಜ್ ಬಿ.ಜಿ, ಕುಂದಾಪುರ ಗಾಣಿಗ ಯುವ ಸಂಘಟನೆಯ ಪ್ರಮುಖರಾದ ಗುರುರಾಜ್ ಹಂಗಳೂರು, ರಾಘವೇಂದ್ರ ಗಾಣಿಗ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಸುಜಾತ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಠಾಣಾಧಿಕಾರಿ ನಾಸೀರ್ ಹುಸೇನ್ ಆಸ್ಪತ್ರೆಗೆ ತೆರಳಿ ಸುಜಾತ ಅವರಿಂದ ಹೇಳಿಕೆಯನ್ನು ಪಡೆದಿದ್ದಾರೆ.