ಟೋಲ್ ಶುಲ್ಕ ನಿಲ್ಲಿಸಲು ಅಗ್ರಹ
ಮುಗಿಯದ ಸಂಕದ ಸುಂಕ
ಮಂಗಳೂರು, ಫೆ.2: ಕರಾವಳಿಯನ್ನು ಹಾದು ಹೋಗಬೇಕಾದರೆ ನಾಲ್ಕು ಟೋಲ್ ಗೇಟುಗಳಲ್ಲಿ ರಸ್ತೆ ಹಾಗೂ ಸಂಕದ (ಸೇತುವೆ) ಸುಂಕವಾಗಿ ವಾಹನ ಸವಾರರಿಂದ ಭಾರೀ ಹಣ ವಸೂಲಿ ನಡೆಯುತ್ತಿದ್ದು, ವಾಹನ ಚಾಲಕರನ್ನು ದರೋಡೆ ಮಾಡುವ ಒಂದು ಯೋಜನೆಯಾಗಿದೆ. ವಾಹನಗಳನ್ನು ಖರೀದಿಸುವಾಗಲೇ ಅದರ ಮಾಲಕರು ರಸ್ತೆ ತೆರಿಗೆಯನ್ನು ದೊಡ್ಡ ಮಟ್ಟದಲ್ಲಿ ಪಾವತಿಸುತ್ತಾರೆ. ಇಲ್ಲಿಯವರೆಗೆ ಕೋಟಿಗಟ್ಟಲೆ ಹಣ ವಾಹನ ಮಾಲಕರಿಂದ ತೆರಿಗೆ ಸಂಗ್ರಹವಾಗಿದ್ದರೂ ಟೋಲ್ ಶುಲ್ಕ ಹಾಗೂ ಸಂಕದ ಸುಂಕದ ಹಣ ವಸೂಲಾತಿ ಮುಗಿದಿಲ್ಲ.
ವಾಹನ ಮಾಲಕರಿಂದ ರಸ್ತೆ ತೆರಿಗೆ ಹಣವನ್ನು ಪಡೆದು ಕೂಡಾ ಸಂಕದ ಸುಂಕ ಹಾಗೂ ರಸ್ತೆ ಟೋಲ್ ಶುಲ್ಕ ವಸೂಲಾತಿ ಈ ರೀತಿ ವಸೂಲು ಮಾಡುವುದು ಸರಿಯೇ? ವಾಹನ ಮಾಲಕರು ರೋಡ್ ಸುಂಕ ಕಟ್ಟುವುದಿಲ್ಲವೇ? ಈಗಲೂ ಸುಂಕ ವಸೂಲಿ ನಡೆಸುವುದು ಹಗಲು ದರೋಡೆಯಲ್ಲದೆ ಇನ್ನೇನು?
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಈ ಸಂಕದ ಸುಂಕ ಹಾಗೂ ರಸ್ತೆ ಶುಲ್ಕ ಅಕ್ರಮ ವಸೂಲಾತಿಯನ್ನು ನಿಲ್ಲಿಸಬೇಕೆಂದು ಜೆಡಿಯು (ಸಂಯುಕ್ತ ಜನತಾದಳ ಪಕ್ಷದ) ದ.ಕ. ಜಿಲ್ಲಾ ಮುಖಂಡ ಸುಪ್ರಿತ್ ಕುಮಾರ್ ಪೂಜಾರಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.