ಫೆ.10: ಎತ್ತಿನಹೊಳೆ ಯೋಜನೆ ವಿರುದ್ಧ ಆಮರಣಾಂತ ಉಪವಾಸ
ಮಂಗಳೂರು,ಫೆ.6: ಎತ್ತಿನಹೊಳೆ ಯೋಜನೆ ವಿರುದ್ಧ ಫೆ.10ರಂದು ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ತಿಳಿಸಿದೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಖಂಡ ಗಣೇಶ್ ರಾವ್, ಸರಕಾರ ನಮ್ಮ ಯಾವ ಕೂಗಿಗೂ ಸ್ಪಂದಿಸಲಿಲ್ಲ. ಆ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಫೆ.10ರಂದು ಬೆಳಗ್ಗೆ 9:45ಕ್ಕೆ ಪುರಭವನ ಬಳಿಯ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. 10:15ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಕೂರಲಾಗುವುದು. 11:30ಕ್ಕೆ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.
ಇದು ರಾಜಕೀಯರಹಿತ, ಪಕ್ಷಾತೀತ, ಧರ್ಮಾತೀತ, ಜಾತ್ಯತೀತ ಹೋರಾಟವಾಗಿದೆ. ಹಾಗಾಗಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ಧರ್ಮಗುರುಗಳು, ವಿದ್ಯಾರ್ಥಿ-ಕಾರ್ಮಿಕ ಸಂಘಟನೆಗಳ ಪ್ರಮುಖರು ಇದರಲ್ಲಿ ಭಾಗವಹಿಸಬೇಕು ಎಂದು ಗಣೇಶ್ ರಾವ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರಾದ ದಿನಕರ ಶೆಟ್ಟಿ, ಎಂ.ಜಿ.ಹೆಗಡೆ, ಹನೀಫ್ ಖಾನ್ ಕೊಡಾಜೆ, ಶಶಿರಾಜ್ ಶೆಟ್ಟಿ ಕೊಳಂಬೆ, ಸತ್ಯಜಿತ್ ಸುರತ್ಕಲ್, ರಘುವೀರ್ ಸೂಟರ್ಪೇಟೆ ಉಪಸ್ಥಿತರಿದ್ದರು.