ಸುರತ್ಕಲ್ ನೂತನ ಮಾರುಕಟ್ಟೆಗೆ ಶಿಲಾನ್ಯಾಸ
ಸುರತ್ಕಲ್, ೆ.20: ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸುರತ್ಕಲ್ ನೂತನ ಮಾರುಕಟ್ಟೆಗೆ ಶಾಸಕ ಮೊಯ್ದೀನ್ ಬಾವಾ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸುಮಾರು 120 ಕೋ.ರೂ. ಮೊತ್ತದ ಕಾಮಗಾರಿ ನೀಲನಕ್ಷೆ ತಯಾರಾಗಿದೆ. ಪ್ರಥಮ ಹಂತದಲ್ಲಿ 60 ಕೋ.ರೂ. ವೆಚ್ಚದ ಟೆಕ್ಷಕ್ನಿಕಲ್ ಅನುಮೋದನೆ ದೊರೆತಿದೆ ಎಂದರು. ನೂತನ ಮಾರುಕಟ್ಟೆಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಗುಜರಿ ಅಂಗಡಿಗಳು, ಬಸ್ ನಿಲ್ದಾಣದ ಬಳಿಯ ಅಂಗಡಿಗಳು ಹಾಗೂ ಹಳೆಯ ಮಾರುಕಟ್ಟೆಯಲ್ಲಿರುವ ಅಂಗಡಿಗಳಿಗೆ ಅವಕಾಶ ನೀಡಲಾಗುವುದು. ಆದರೆ ಹಳೆಯ ಮಾರುಕಟ್ಟೆಯಲ್ಲಿ ಒಂದು ಅಂಗಡಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರಿಗೆ ನೀಡಲು ಸಾಧ್ಯವಿಲ್ಲ ಎಂದರು.
ಈಗಾಗಲೇ ಆರಂಭಗೊಂಡಿರುವ ಷಟ್ಪಥ ರಸ್ತೆ ಕಾಮಗಾರಿಯನ್ನು ಮತ್ತಷ್ಟು ಮುಂದುವರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನ ಮತ್ತೊಂದು ಸುತ್ತಿನ ಅನುದಾನ ಬಳಸಿಕೊಂಡು ರಸ್ತೆ ಕಾಮಗಾರಿ ಮುಂದುವರಿಸಲಾಗುವುದು ಎಂದು ಹೇಳಿದರು.
ಕಾರ್ಪೊರೇಟರ್ಗಳಾದ ಪ್ರತಿಬಾ ಕುಳಾಯಿ, ಬಶೀರ್ ಅಹ್ಮದ್, ಮಾಜಿ ಮೇಯರ್ ಗುಲ್ಝಾರ್ ಬಾನು, ರಾಘವೇಂದ್ರ ಉಪಸ್ಥಿತರಿದ್ದರು.