ಸೈಂಟ್ ಜೋಸೆಫ್ ಕಾಲೇಜು: ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ
ಮಂಗಳೂರು, ಫೆ.24: ಜ್ಞಾನ, ಸಂಪತ್ತು ಪ್ರತೀ ಸಂಸ್ಥೆಯ ಬೆಳವಣಿಗೆಯ ಅಡಿಗಲ್ಲಾಗಿದೆ. ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಾದ ಬಿಲ್ಗೇಟ್ಸ್, ನಾಡೆಲ್ಲಾ, ಗಿರಾರ್ಡ್ ಟೆಲ್ಲೀಸ್, ಐನ್ಸ್ಟೈೀನ್, ಡಾ.ವಿನ್ಸಿ ಮೊದಲಾದವರ ಜೀವನ ಸಾಧನೆಗಳನ್ನು ಗಮನಿಸಿದಾಗ ಈ ಎಲ್ಲರೂ ಸಾಮಾನ್ಯ ವ್ಯಕ್ತಿಗಳಾಗಿದ್ದರೂ, ತಮ್ಮ ಪರಿಶ್ರಮದ ಮೂಲಕ ಅಸಾಮಾನ್ಯ ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಏರಿದ್ದಾರೆ ಎಂದು ಎಐಎಂಐಟಿಯ ನಿರ್ದೇಶಕ ಡೆನ್ಝಿಲ್ ಲೋಬೊ ತಿಳಿಸಿದರು.
ಅವರು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಟಿಐಎಆರ್ಎ-2017’ನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಜೋಸೆಫ್ ಲೋಬೊ ಮಾತನಾಡಿ, ನಮ್ಮ ಜ್ಞಾನವನ್ನು ದೇಶದ ಯುವ ಜನರಿಗೆ ಹಾಗೂ ಬಡಜನರ ಮೇಲೆ ಕರುಣೆ ತೋರಿ ಅವರ ಸಹಾಯಕ್ಕೆ ಬಳಸುವಂತಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಉಪನಿರ್ದೇಶಕ ರೋಹಿತ್ ಡಿಕೋಸ್ತ, ಪ್ರಾಂಶುಪಾಲ ಜೋಸೆಫ್ ಗೋನ್ಸಾಲ್ವೆಸ್, ಉಪ ಪ್ರಾಂಶುಪಾಲ ಡಾ.ರೀಯೋ ಡಿಸೋಜ ಹಾಗೂ ಸಮಾವೇಶದ ಸಂಚಾಲಕ ಎವಿಟಾ ಕೊಯೆಲ್ಲೋ, ಒರ್ವಿಲ್ಲಿ ಸುಟೈರ್ ಮೊದಲಾದವರು ಉಪಸ್ಥಿತರಿದ್ದರು.