ಮಂಗಳೂರು: ಬಸ್ಸಿಗೆ ಕಲ್ಲು ತೂರಿದ 9 ಮಂದಿಯ ಬಂಧನ, 50ಕ್ಕೂ ಅಧಿಕ ಮಂದಿ ವಶಕ್ಕೆ
ಮಂಗಳೂರು, ಫೆ. 25: ನಗರದಲ್ಲಿ ಶನಿವಾರ ನಡೆದ ಹರತಾಳ ಹಿನ್ನೆಲೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ಮತುತಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿವಿಧೆಡೆ 9 ಮಂದಿಯನ್ನು ಬಂಧಿಸಿರುವ ಪೊಲೀಸರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಸಂದೀಪ್, ಗಣೇಶ್ ಕುಲಾಲ್, ತರುಣ್, ಸಂಜಯ್, ವಿನೋದ್, ಸೂರಜ್, ರತನ್, ಕಿರಣ್, ಭವಾನಿ ಶಂಕರ್ ಎಂದು ಗುರುತಿಸಲಾಗಿದೆ.
ಮುಂಜಾನೆ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಂದೀಪ್, ಗಣೇಶ್ ಕುಲಾಲ್, ತರುಣ್, ಸಂಜಯ್, ವಿನೋದ್, ಸೂರಜ್ ಎಂಬವರನ್ನು ಬಂಧಿಸಿದ್ದರೆ, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿನಗರದ ಭವಾನಿ ಶಂಕರ್ (26) ಎಂಬವರನ್ನು ಬಂಧಿಸಲಾಗಿದೆ.
ಅಲ್ಲದೆ, ಪಡೀಲ್ ವ್ಯಾಪ್ತಿಯಲ್ಲಿ ರಾತ್ರಿ ಇಂಡಿಕಾ ಕಾರಿನಲ್ಲಿ 4 ಟಯರ್, ಪೆಟ್ರೋಲ್ ಹಿಡಿದುಕೊಂಡು ತಿರುಗಾಡುತ್ತಿದ್ದ ರತನ್ ಮತ್ತು ಕಿರಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲೆಸೆತ ಪ್ರಕರಣದಲ್ಲಿ ಭವಾನಿ ಶಂಕರ್ ಜೊತೆಗಿದ್ದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಆರೋಪಿಗಳು ಮುಖಕ್ಕೆ ಹಾಗೂ ಬೈಕ್ನ ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿ ಕಾವೂರಿನ ವಿದ್ಯಾನಗರ ಹಾಗೂ ಕೊಂಚಾಡಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಗೆ ಶನಿವಾರ ಕಲ್ಲೆಸೆದು ಗಾಜು ಒಡೆದು ಪರಾರಿಯಾಗಿದ್ದರು.
ಕಾವೂರು ಠಾಣಾ ವ್ಯಾಪ್ತಿಯಲ್ಲಿ 15ಮಂದಿ, ಉರ್ವ ಠಾಣಾ ವ್ಯಾಪ್ತಿಯಲ್ಲಿ 10 ಮಂದಿ, ಪಾಂಡೇಶ್ವರ 10 ಮಂದಿ, ಕದ್ರಿ 11 ಮಂದಿ, ಕೋಣಾಜೆ 3, ಬಂದರಿನಲ್ಲಿ 8 ಮಂದಿಯನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.
ಉಳ್ಳಾಲದಲ್ಲಿ ನಾಲ್ವರು ವಶಕ್ಕೆ:
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.