ಉಡುಪಿ: 25-26ಕ್ಕೆ ಆದರ್ಶ ಟ್ರೋಫಿ ಕ್ರಿಕೆಟ್ ಟೂರ್ನಿ
ಉಡುಪಿ, ಮಾ.20: ಫ್ರೆಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮಾ.25 ಮತ್ತು 26ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಟೂರ್ನಿಯ ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನೀಡಲಾಗುವ ಆಕರ್ಷಕ ಟ್ರೋಫಿಯ ಅನಾವರಣವೂ ಇಲ್ಲಿ ನಡೆಯಿತು. ವಿಜೇತ ತಂಡಕ್ಕೆ ಎರಡು ಲಕ್ಷ ರೂ. ನಗದು ಹಾಗೂ ಆದರ್ಶ್ ಟ್ರೋಫಿ ಮತ್ತು ರನ್ನರ್ ಅಪ್ ತಂಡಕ್ಕೆ ಒಂದು ಲಕ್ಷ ರೂ.ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು. ಸರಣಿ ಶ್ರೇಷ್ಠ ಆಟಗಾರನಿಗೆ ಯಮಾಹ ಬೈಕ್, ಪ್ರತೀ ಪಂದ್ಯದ ‘ಪಂದ್ಯ ಶ್ರೇಷ್ಠ’ ಆಟಗಾರನಿಗೆ ಆಕರ್ಷಕ ಮೊಬೈಲ್ ಸೆಟ್ನ್ನು ಬಹುಮಾನವಾಗಿ ನೀಡಲಾಗುವುದು ಎಂದರು.
ಗೋವಾ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಒಟ್ಟು 20 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಅನ್ಸಾರ್, ಅಸದುಲ್ಲಾ ಕಟಪಾಡಿ ಹಾಗೂ ಗೌತಮ್ ಉಪಸ್ಥಿತರಿದ್ದರು.