ಕಲಾಕೃತಿಗಳು ಫ್ಯಾಕ್ಟರಿಯ ಸರಕುಗಳಲ್ಲ: ಜನಾರ್ದನ ಹಾವಂಜೆ
ಉಡುಪಿ, ಮಾ.23: ಕಲಾಕೃತಿಗಳನ್ನು ಇಂದು ಫ್ಯಾಕ್ಟರಿಯಲ್ಲಿ ಉತ್ಪಾದಿಸುವ ವಸ್ತುಗಳ ರೀತಿಯಲ್ಲಿ ರಚಿಸಲಾಗುತ್ತದೆ. ಇದರಿಂದ ನಾವು ಹೊರ ಬಂದು ದೇಶೀಯ ವಿಷಯಗಳತ್ತ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ಹಾವಂಜೆ ಭಾವನಾ ಪ್ರತಿಷ್ಠಾನದ ಕಲಾವಿದ ಜನಾರ್ದನ ಹಾವಂಜೆ ಹೇಳಿದ್ದಾರೆ.
ಉಡುಪಿ ಚಿತ್ರಕಲಾ ಮಂದಿರದ ಕಲಾ ವಿದ್ಯಾರ್ಥಿಗಳ ಎಂಟು ದಿನಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನ 'ವರ್ಣ ನಿರಂತರ'ವನ್ನು ಗುರುವಾರ ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೇತ್ರಾವತಿ ತಿರುವು ಸೇರಿದಂತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಬೇಕು. ಈ ಮೂಲಕ ಕಲಾಕೃತಿಯ ಮೂಲಕ ಅವರನ್ನು ಅವರು ಸಮಾಜಕ್ಕೆ ತೋರಿಸಬೇಕು. ಸ್ವಂತಿಕೆಯನ್ನು ಬಿಡದೆ ಕೆಲಸ ಮಾಡ ಬೇಕಾಗಿದೆ. ಇದರಿಂದ ಕಲಾಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ಪಿಯುಎಸ್ ಪ್ರೊಡಕ್ಟ್ನ ಮ್ಯಾನೇ ಜರ್ ಸತೀಶ್ ಚಂದ್ರ, ಅಮೆರಿಕಾದ ಮೋಹನ್ ಕಾಮತ್, ಕಲಾವಿದೆ ಭವನ ಆಚಾರ್ಯ ಉಪಸ್ಥಿತರಿದ್ದರು.
ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಅಧ್ಯಕ್ಷತೆ ವಹಿಸಿ ದ್ದರು. ಸಂತೋಷ್ ಮಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ರಚಿಸಿದ ವಿವಿಧ ಕಲಾಕೃತಿಗಳ ಪ್ರದರ್ಶನವು ಮಾ.30ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ.