ಉಡುಪಿ: ಇಂದಿನಿಂದ ರಾ.ಅಣಕು ನ್ಯಾಯಾಲಯ ಸ್ಪರ್ಧೆ
ಉಡುಪಿ, ಎ.6: ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜು ಈ ವರ್ಷ ವಜ್ರ ಮಹೋತ್ಸವದ (1957) ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಎ.7ರಿಂದ 9ರವರೆಗೆ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿಂದು ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಹೇಳಿದರು.
ಉಡುಪಿಯ ಖ್ಯಾತ ನ್ಯಾಯವಾದಿಯಾಗಿದ್ದ ಪಿ.ಶಿವಾಜಿ ಶೆಟ್ಟಿ ಅವರ ಸ್ಮರಣಾರ್ಥ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಡೆಯುವ ಈ ಸ್ಪರ್ಧೆಯಲ್ಲಿ 24 ಕಾಲೇಜುಗಳು ಭಾಗವಹಿಸಲಿವೆ. ಕಾನೂನು ಕ್ಷೇತ್ರದಲ್ಲಿ ಹೆಸರು ಮಾಡಿರುವ 36 ನ್ಯಾಯವಾದಿಗಳು ಸ್ಪರ್ಧೆಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆ, ಕಾನೂನು ರಸಪ್ರಶ್ನೆ ಸ್ಪರ್ಧೆ ಹಾಗೂ ತೀರ್ಪು ಬರವಣಿಗೆ ಸ್ಪರ್ಧೆಗಳಿದ್ದು, ಇದರಲ್ಲಿ ಎಲ್ಲಾ ತಂಡಗಳು ಭಾಗವಹಿಸಲಿವೆ. ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ 10,000 ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 8,000 ರೂ.ನಗದು ಬಹುಮಾನವಿದೆ. ರಸಪ್ರಶ್ನೆ ಸ್ಪರ್ಧೆ ಹಾಗೂ ತೀರ್ಪು ಬರವಣಿಗೆ ಸ್ಪರ್ಧೆಗಳ ವಿಜೇತರಿಗೆ ತಲಾ 5,000 ರೂ. ವೈಯಕ್ತಿಕ ನಗದು ಬಹುಮಾನವಿದೆ ಎಂದರು.
ಇಂದು ಸಂಜೆ 4ಕ್ಕೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿಯ ಕುಲಪತಿ ಪ್ರೊ.ಡಾ.ಸಿ.ಎಸ್.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಯಂತಿ ಪಿ.ಶಿವಾಜಿ ಶೆಟ್ಟಿ ಮುಖ್ಯ ಅತಿಥಿಯಾಗಿದ್ದು, ಮಣಿಪಾಲ ವಿವಿಯ ಪ್ರೊ.ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭ ಎ.9ರ ಅಪರಾಹ್ನ 3:30ಕ್ಕೆ ಕರ್ನಾಟಕ ಲೋಕಾಯುಕ್ತ ಜಸ್ಟಿಸ್ ಪಿ.ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಯಂತಿ ಪಿ.ಶಿವಾಜಿ ಶೆಟ್ಟಿ, ಹಿರಿಯ ಉಪನ್ಯಾಸಕರಾದ ಡಾ.ನಿರ್ಮಲಾ ಕುಮಾರಿ, ರೋಹಿತ್ ಪಿ.ಅಮೀನ್ ಹಾಗೂ ಶಂಕರಮೂರ್ತಿ ಬಿ.ಜಿ. ಮೊದಲಾದವರು ಉಪಸ್ಥಿತರಿದ್ದರು.