ಜಲೀಲ್ ಕರೋಪಾಡಿ ಹತ್ಯೆ: ವಿವಿಧ ಸಂಘಟನೆಗಳಿಂದ ಖಂಡನೆ
ಮಂಗಳೂರು, ಎ.20: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿಯವರನ್ನು ಕೊಲೆಗೈದ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಖಂಡಿಸಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಸ್ಲಿಂ ಸಂಘಟನೆಗಳ ಒಕ್ಕೂಟ: ಜಲೀಲ್ ಕರೋಪಾಡಿಯವರನ್ನು ಹಾಡಹಗಲೇ ಕೊಲೆಗೈದ ಕೃತ್ಯವನ್ನು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ಪೊಲೀಸ್ ಇಲಾಖೆಯು ದುಷ್ಕರ್ಮಿಗಳು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾ ಎಸ್ಡಿಪಿಐ: ಗ್ರಾಪಂ ಕಚೇರಿ ಆವರಣದಲ್ಲೇ ಜಲೀಲ್ ಕರೋಪಾಡಿಯವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಸರಕಾರಿ ಕಚೇರಿ ಆವರಣದಲ್ಲೇ ಜನಪ್ರತಿನಿಧಿಯ ಮೇಲೆ ಈ ರೀತಿಯ ದಾಳಿಯು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಹಿಂದೆ ಮಂಗಳೂರು ತಾಪಂ ಅಧ್ಯಕ್ಷ ಅಬ್ದುಲ್ ಜಬ್ಬಾರ್ರನ್ನು ಪಂಚಾಯತ್ ಆವರಣದಲ್ಲಿ ಹಾಡುಹಗಲೆ ದುಷ್ಕರ್ಮಿಗಳು ಕೊಲೆ ನಡೆಸಿದ್ದರು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಕೊಲೆಗೈದ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದ್ದಾರೆ.
ದ.ಕ.ಜಿಲ್ಲಾ ಜೆಡಿಎಸ್: ಜಲೀಲ್ ಕರೋಪಾಡಿಯವರ ಹತ್ಯೆಯನ್ನು ದ.ಕ.ಜಿಲ್ಲಾ ಜಾತ್ಯತೀತ ಜನತಾ ದಳ ಖಂಡಿಸಿದೆ. ಆರೋಪಿಯನ್ನು ತಕ್ಷಣ ಬಂಧಿಸಿ ಕ್ರಮ ಜರಗಿಸುವಂತೆ ಪಕ್ಷದ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಒತ್ತಾಯಿಸಿದ್ದಾರೆ.
ರಾಜ್ಯ ಎಸ್ಸೆಸ್ಸೆಫ್ ಖಂಡನೆ: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿಯವರ ಹತ್ಯೆಯನ್ನು ರಾಜ್ಯ ಎಸ್ಸೆಸ್ಸೆಫ್ ಖಂಡಿಸಿದೆ. ಜಲೀಲ್ ಸರಳ ವ್ಯಕ್ತಿತ್ವದ ಮಾದರಿಯೋಗ್ಯ ರಾಜಕಾರಣಿಯಾಗಿದ್ದು, ಜನಸೇವೆಯನ್ನೇ ತನ್ನ ಧ್ಯೇಯವಾಗಿರಿಸಿಕೊಂಡವರಾಗಿದ್ದರು. ಕೊಲೆಗಡುಕರ ವಿರುದ್ಧ ಶೀಘ್ರ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಆಗ್ರಹಿಸಿದ್ದಾರೆ.