ಪರರ ಕಷ್ಟಗಳಿಗೂ ಸ್ಪಂದಿಸುವ ಮನೋಭಾವ ನಮ್ಮದಾಗಬೇಕು: ಸೀತಾರಾಮ್ ಕಟೀಲ್
ಮಂಗಳೂರು ವಿವಿ ‘ಸಂಭ್ರಮ-2017'
ಕೊಣಾಜೆ, ಎ.20: ಬದುಕಿನಲ್ಲಿ ಯಾವತ್ತೂ ನಾವು ಸುಖವನ್ನು ಮಾತ್ರ ಬಯಸದೆ, ಉತ್ತಮ ಜೀವನವನ್ನು ಕಂಡುಕೊಳ್ಳಲು ಪರರ ದುಃಖಗಳಿಗೂ ಸ್ಪಂದಿಸಬೇಕು ಎಂದು ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಅವರು ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೀತಾರಮ್ ಕುಮಾರ್ ಕಟೀಲ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು. ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷ ಶ್ಯಾಮಪ್ರಸಾದ್, ವೀರೇಂದ್ರ ಮೊಗವೀರ, ಸುಕ್ಷಿತಾ ರಾವ್ ಬಿ, ಅಶೋಕ್ ಆರ್. ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಸ್ವಾಗತಿಸಿದರು. ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಪದಾಧಿಕಾರಿಗಳಾದ ಸುನೀಲ್ ಕೆ.ಎಂ ವರದಿ ಓದಿದರು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಸಮಗ್ರ ಪ್ರಶಸ್ತಿ ಪಡೆದರೆ, ಇಂಡಸ್ಟ್ರಿಯಲ್ ಕೆಮೆಸ್ಟ್ರಿ ಮತ್ತು ಬಯೋಕೆಮಿಸ್ಟ್ರಿ ದ್ವಿತೀಯ ಹಾಗೂ ಫಿಸಿಕ್ಸ್ ವಿಭಾಗದ ತೃತೀಯ ಸ್ಥಾನ ಪಡೆಯಿತು.