ಕಂಕನಾಡಿ: ಮೊಬೈಲ್ ಅಂಗಡಿಗೆ ನುಗ್ಗಿ ತಂಡದಿಂದ ಯುವಕನಿಗೆ ಹಲ್ಲೆ
ಮಂಗಳೂರು, ಎ.21: ಮೊಬೈಲ್ ಅಂಗಡಿಗೆ ನುಗ್ಗಿದ ಸುಮಾರು 50 ಮಂದಿಯ ತಂಡ ಅಂಗಡಿಯಲ್ಲಿದ್ದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದು ಬೆಳಗ್ಗೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿ ನಡೆದಿದೆ.
ಗುಂಪಿನಿಂದ ಹಲ್ಲೆಗೊಳಗಾದ ಯುವಕನನ್ನು ಅಡ್ಯಾರ್ ಕಣ್ಣೂರಿನ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಪುತ್ರ ಝಹೀರ್ (34) ಎಂದು ಗುರುತಿಸಲಾಗಿದೆ.
ಜಾಬಿ ಎಂಬ ಹೆಸರಿನಿಂದ ಹುಡುಗಿಯೊಬ್ಬಳಿಗೆ ಬಂದ ಸಂದೇಶವನ್ನು ಪ್ರಶ್ನಿಸಲು ಬಂದ ಗುಂಪು ಝಹೀರ್ ಎಂಬವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಅಂಗಡಿಗೆ ನುಗ್ಗಿದ ಗುಂಪು ‘‘ನಿನ್ನ ಹೆಸರು ಜಾಬಿರ್ ಅಲ್ವಾ’ ಎಂದು ಹೇಳಿ ಹಲ್ಲೆ ನಡೆಸಿದ್ದು, 'ನಾನು ಜಾಬಿರ್ ಅಲ್ಲ ಝಹೀರ್' ಎಂದು ಹೇಳಿ ಹಲ್ಲೆಗೊಳಗಾದ ಝಹೀರ್ ತನ್ನ ಆಧಾರ್ ಕಾರ್ಡ್, ಪ್ರಮಾಣ ಪತ್ರ ತೋರಿಸಿದ್ದರೂ ಗುಂಪಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆ ಎಂದು ಅಂಗಡಿಯಲ್ಲಿರುವ ಆತನ ಸಹೋದರರೊಬ್ಬರು ಆರೋಪ ಮಾಡಿದ್ದಾರೆ.
ಮೊಬೈಲ್ ಅಂಗಡಿಗೆ ನುಗ್ಗಿರುವ ಹೆಚ್ಚಿನವರು ಅಂಗಡಿಯ ಗ್ರಾಹಕರಾಗಿದ್ದು, ಪೂರ್ವ ಯೋಜಿತವಾಗಿ ಈ ಹಲ್ಲೆ ನಡೆಸಲಾಗಿದೆ. ಇದೇ ಗುಂಪಿನಲ್ಲಿದ್ದ ಬಹುತೇಕ ಮಂದಿ ಈ ಹಿಂದೆ ಪೂಜಾ ಕಾರ್ಯಕ್ರಮ, ಇತರ ಹಬ್ಬಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣ ಸಂಗ್ರಹಿಸಲು ಬರುತ್ತಿದ್ದು, ಝಹೀರ್ ಅವರಿಗೆ ಹಣ ಕೊಡದಿರುವುದೇ ಹಲ್ಲೆಗೆ ಕಾರಣ ಎಂದು ಝಹೀರ್ನ ಸಹೋದರ ಆರೋಪ ಮಾಡಿದ್ದಾರೆ.