ತೋಟ ಬೆಂಗ್ರೆಯಲ್ಲಿ ಮೃತದೇಹ ಪತ್ತೆ : ಕೊಲೆ ಶಂಕೆ
ಮಂಗಳೂರು, ಎ. 21: ನಗರದ ಹೊರ ವಲಯದ ತೋಟ ಬೆಂಗ್ರೆಯಲ್ಲಿ ಅಳಿವೆವಾಗಿಲು ಸಮೀಪದ ನದಿ ಕಿನಾರೆಯಲ್ಲಿ ವ್ಯಕ್ತಿಯೋರ್ವನ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ತೋಟ ಬೆಂಗ್ರೆಯ ನಿವಾಸಿ ಆನಂದ ಎಂಬವರ ಪುತ್ರ ಜಗದೀಶ್ ಸುವರ್ಣ (37) ಎಂದು ಗುರುತಿಸಲಾಗಿದೆ. ಈತ ಬಜರಂಗದಳದ ಕಾರ್ಯಕರ್ತನೆಂದು ಹೇಳಲಾಗಿದೆ.
ಜಗದೀಶ್ ಸುವರ್ಣ ಗುರುವಾರ ರಾತ್ರಿ ಬೆಂಗ್ರೆಯ ಸಮೀಪ ಪರಿಚಯಸ್ಥರ ಮೆಹಂದಿ ಕಾರ್ಯಕ್ರಮಕ್ಕೆಂದು ತೆರಳಿದ್ದರು. ಮುಂಜಾನೆ 3 ಗಂಟೆಯವರೆಗೂ ಕಾರ್ಯಕ್ರಮದಲ್ಲಿದ್ದು, ಬಳಿಕ ತಾನು ಕೆಲಸ ನಿರ್ವಹಿಸುತ್ತಿದ್ದ ಪ್ಯಾಸೆಂಜರ್ ಬೋಟ್ಗೆ ತೆರಳಿದ್ದರು ಎನ್ನಲಾಗಿದೆ.
ಪ್ರತಿದಿನ 4.30ಕ್ಕೆ ಪ್ಯಾಸೆಂಜರ್ ಬೋಟ್ನಲ್ಲಿ ನಿರ್ವಾಹಕನಾಗಿ ಕೆಲಸ ನಿರ್ವಹಿಸಲು ತೆರಳುತ್ತಿದ್ದು, ಶುಕ್ರವಾರ ಮುಂಜಾನೆ 3 ಗಂಟೆಯ ಬಳಿಕ ಮದರಂಗಿ ಕಾರ್ಯಕ್ರಮದ ಮನೆಯಿಂದಲೇ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಮೃತ ದೇಹ ಪತ್ತೆಯಾದ ಸ್ಥಳಕ್ಕಾಗಮಿಸಿರುವ ಪಣಂಬೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಜಗದೀಶ್ ಅವರ ಸಹೋದರ ಶಿವಾನಂದ ಸುವರ್ಣ ಎಂಬವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.