ಅಪಪ್ರಚಾರ ಮಾಡಿದ ಯುವಕನಿಗೆ ಠಾಣೆಯ ಮುಂದೆಯೇ ಚಪ್ಪಲಿಯೇಟು ನೀಡಿದ ಯುವತಿ!
ಮೂಡುಬಿದಿರೆ, ಎ.24: ಯುವಕನೋರ್ವ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ, ಠಾಣೆಯಿಂದ ಹೊರಬಂದು ಯುವಕನಿಗೆ ಚಪ್ಪಲಿಯೇಟು ನೀಡಿದ ಘಟನೆ ನಡೆದಿದೆ.
ತನ್ನ ಮೇಲೆ ಪೊಲೀಸ್ ದೂರು ದಾಖಲಾಗಿದ್ದರಿಂದ ಪೊಲೀಸರ ಬುಲಾವ್ನ ಮೇರೆಗೆ ಠಾಣೆಗೆ ತೆರಳಿದ್ದ ಮಾರ್ಪಾಡಿಯ ಯಶೋಧರ ಎಂಬಾತ ಠಾಣೆಯಿಂದ ಹೊರಬಂದ ಬಳಿಕ ಯುವತಿಯಿಂದ ಚಪ್ಪಲಿಯೇಟು ತಿಂದ ವ್ಯಕ್ತಿ.
ಅಲಂಗಾರಿನ ನಿವಾಸಿಯಾಗಿರುವ ಯುವತಿ ತನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾನೆ ಎಂದು ಮಾರ್ಪಾಡಿಯ ಯಶೋಧರ ಎಂಬಾತನ ವಿರುದ್ಧ ದೂರು ನೀಡಲು ಠಾಣೆಗೆ ಆಗಮಿಸಿದ್ದಳು. ಪ್ರಕರಣದ ಬಗ್ಗೆ ಯುವಕನ ವಿಚಾರಣೆ ನಡೆಸಿದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಠಾಣೆಯಿಂದ ಹೊರಬಂದ ಬಳಿಕ ಯುವತಿ ಇದ್ದಕ್ಕಿದ್ದಂತೆ ಯುವಕನಿಗೆ ಚಪ್ಪಲಿಯೇಟು ನೀಡಿದ್ದಾಳೆ.
ಅಪಪ್ರಚಾರ ನಡೆಸಿದ ಯುವಕ ಹಾಗೂ ಕಾನೂನನ್ನು ಕೈಗೆತ್ತಿಕೊಂಡ ಯುವತಿಯ ವಿರುದ್ಧ ಮತ್ತೆ ದೂರು ದಾಖಲಾಗಿದ್ದು, ಮತ್ತೊಮ್ಮೆ ವಿಚಾರಣೆ ನಡೆಸುವ ಸರದಿ ಪೊಲೀಸರದ್ದು!.
Next Story