ಮಂಗಳೂರು ವಲಯ ಕಬಡ್ಡಿ ಪಂದ್ಯಾಟ: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿನ್ನರ್, ಆಳ್ವಾಸ್ ರನ್ನರ್ಸ್
ಮೂಡುಬಿದಿರೆ, ಎ.25: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ತೋಡಾರಿನಲ್ಲಿರುವ ಯೆನೆಪೊಯ ಇಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸೋಮವಾರ ತೋಡಾರು ಯೆನೆಪೊಯ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಪುರುಷರ ಕಬಡ್ಡಿ ಫೈನಲ್ ಪಂದ್ಯಾಟದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಪ್ರಶಸ್ತಿ ಗಳಿಸಿದೆ. ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪುತ್ತೂರಿನ ವಿವೇಕಾನಂದ ಕಾಲೇಜು ತಂಡವು ಆಳ್ವಾಸ್ ಇಂಜಿನಿಯರಿಂಗ್ ತಂಡವನ್ನು 28-24ರ ಅಂತರದಿಂದ ಸೋಲಿಸಿ ಪ್ರಶಸ್ತಿ ಗಳಿಸಿ, ಎ.28ರಂದು ನಡೆಯುವ ಅಂತರ್ ವಲಯ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿದೆ. ಆಳ್ವಾಸ್ನ ಮನೀಲ್ ಉತ್ತಮ ರೈಡರ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶರ್ ಬೆಸ್ಟ್ ಕ್ಯಾಚರ್, ಪವನ್ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರಾಂಶುಪಾಲ ಡಾ. ಆರ್.ಜಿ. ಡಿಸೋಜ, ಸಂಸ್ಥೆಯ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್, ತೀರ್ಪುಗಾರ ಪ್ರೇಮನಾಥ್ ಶೆಟ್ಟಿ ಪ್ರಶಸ್ತಿ ವಿತರಿಸಿದರು.