‘ನರೋತ್ತಮ ನಾರಾಯಣ ರಾಯರು’ ಕೃತಿ ಅನಾವರಣ
ಉಡುಪಿ, ಎ.30: ಉಡುಪಿ ಬಳಕೆದಾರರ ವೇದಿಕೆ ವತಿಯಿಂದ ಡಾ.ಪಿ. ನಾರಾಯಣ ರಾವ್ ಕುರಿತ ‘ನರೋತ್ತಮ ನಾರಾಯಣ ರಾಯರು’ ಕೃತಿಯನ್ನು ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ರವಿವಾರ ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನ ಶ್ರೀವಿಬುಧೇಶತೀರ್ಥ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ಇಂದು ಜನಪ್ರಿಯರಾಗುವ ನಾಯಕರಿಗಿಂತ ಜನಹಿತ ಕಾಪಾಡುವ ಜನ ನಾಯಕರ ಅಗತ್ಯವಿದೆ. ನಾಯಕನಾದವರು ತಪ್ಪನ್ನು ಗುರುತಿಸಿ ತಿದ್ದಿ ಸಮಾಜದ ಹಿತ ಕಾಯುವ ಚಿಂತಕರಾಗಿ ಕೆಲಸ ಮಾಡಬೇಕಾಗಿದೆ ಎಂದು ಅದಮಾರು ಸ್ವಾಮೀಜಿ ಹೇಳಿದರು.
ಅಧ್ಯಕ್ಷತೆಯನ್ನು ರಂಗ ನಿರ್ದೇಶಕ ಪ್ರೊ.ಉದ್ಯಾವರ ಮಾಧವ ಆಚಾರ್ಯ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ನ ಸಹಾಯಕ ಪ್ರಬಂಧಕ ಪಾಂಡುರಂಗ ಶಾನುಭಾಗ್, ಗ್ರಂಥ ಸಂಪಾದಕ ಪ್ರೊ.ರಾಧಾಕೃಷ್ಣ ಆಚಾರ್ಯ, ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ್ ಐತಾಳ್ ಉಪಸ್ಥಿತರಿದ್ದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
Next Story