ಫೆ.26-28: ಬೆಂಗಳೂರಿನಲ್ಲಿ ಗ್ಲೋಬಲ್ ವೆಲ್ನೆಸ್ ಮೀಟ್
ಮಂಗಳೂರು, ಫೆ.13: ಕರ್ನಾಟಕ ಆರೋಗ್ಯ ಇಲಾಖೆ ಮತ್ತು ಆಯುರ್ವೇದ ಯುನಾನಿ ವೈದ್ಯ ಮಂಡಳಿಯ ಆಶ್ರಯದಲ್ಲಿ ಫೆ.26, 27 ಮತ್ತು 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಗ್ಲೋಬಲ್ ವೆಲ್ನೆಸ್ ಮೀಟ್-2016’ ಆಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಫೆ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಇದರಲ್ಲಿ ಬಾಲಿ ದೇಶದ ರಾಜ, ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು, ಸಾರ್ಕ್ ದೇಶದ ಪ್ರತಿನಿಧಿ ಗಳು ಭಾಗವಹಿಸುವರು ಎಂದವರು ಹೇಳಿದರು.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ 6 ಸೆಮಿನಾರ್ಗಳು ನಡೆಯಲಿವೆ. ಮೇಳದಲ್ಲಿ 100ಕ್ಕೂ ಅಧಿಕ ಫುಡ್ಕೋರ್ಟ್ಗಳಲ್ಲಿ ಆಹಾರ ಪದ್ಧತಿಯ ಪ್ರದರ್ಶನ ನಡೆಯಲಿದ್ದು, ಆಯುಷ್ನ 300ಕ್ಕಿಂತ ಹೆಚ್ಚು ಕಂಪೆನಿಗಳ ಆಯುಷ್ ಎಕ್ಸ್ ಪೋ ಮತ್ತು ಉದ್ಯೋಗ ಮೇಳ, ಆಯುಷ್ ಉದ್ಯಮ ನಡೆಸಲು ಲೋನ್ ಮೇಳಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ವಿಶೇಷತೆಯಾಗಿ ಆಯುರ್ವೇದ ಗುರು ಧನ್ವಂತರಿಯ 124 ಮೂರ್ತಿಯನ್ನು ಬೆಂಗಳೂರಿನ ಅರಮನೆ ಮೈದಾನ ಪ್ರವೇಶದಲ್ಲಿ ನಿರ್ಮಿಸಲಾಗುತ್ತಿದೆ. ಪ್ರಸಕ್ತ 120 ಅಡಿಯ ಶಿಲೆಯಲ್ಲಿ ನಿರ್ಮಾ ಣವಾದ ಧನ್ವಂತರಿ ಮೂರ್ತಿ ಗಿನ್ನೆಸ್ ದಾಖಲೆ ಯಲ್ಲಿದ್ದು, ಇಲ್ಲಿ 124 ಅಡಿ ಫೈಬರ್ನಲ್ಲಿ ಮೂರ್ತಿ ಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಗಿನ್ನೆಸ್ ದಾಖಲೆಗೆ ಪಾತ್ರವಾಗಲಿದೆ.
ವೈದ್ಯರ ಕೊರತೆ ನಿವಾರಣೆಗೆ ಕ್ರಮ: ರಾಜ್ಯದಲ್ಲಿ ಇರುವ ವೈದ್ಯರ ಕೊರತೆಯನ್ನು ನಿವಾರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅಂಗಾಂಗ ದಾನಕ್ಕೆ ಸಂಬಂಧಪಟ್ಟಂತೆ ಇರುವ ಕಠಿಣ ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಚಿಂತನೆಯಿದೆ. ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಪ್ರಕ್ರಿಯೆ ನಡೆಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಇಂದು ಗಿನ್ನೆಸ್ ದಾಖಲೆಗಾಗಿ ಯೋಗ
ಗಿನ್ನೆಸ್ ದಾಖಲೆಗಾಗಿ ಫೆ.14ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಜನರಿಂದ ಯೋಗವನ್ನು ಆಯುಷ್ ಇಲಾಖೆ ಮತ್ತು ಆನಂದ್ ಗುರೂಜಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಏಕಕಾಲದಲ್ಲಿ 35,896 ಮಂದಿ ಯೋಗ ಮಾಡಿರುವುದು ಪ್ರಸ್ತುತ ಗಿನ್ನೆಸ್ ದಾಖಲೆಯಾಗಿದ್ದು, ಇದನ್ನು ಮುರಿದು ಹೊಸ ದಾಖಲೆ ನಿರ್ಮಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಪಕ್ಷಗಳಿಗೆ ಟೀಕೆಗೆ ಸೂಕ್ತ ವಿಷಯವೇ ಇಲ್ಲ
ರಾಜ್ಯ ಸರಕಾರದ ಅಭಿವೃದ್ಧಿ ವಿಚಾರವಾಗಿ ವಿಪಕ್ಷಗಳಿಗೆ ಟೀಕಿ ಸಲು ಯಾವುದೇ ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಾಚ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಸಣ್ಣಪುಟ್ಟ ವಿಚಾರಗಳನ್ನಿಟ್ಟು ಕೊಂಡು ಆರೋಪ ಮಾಡುತ್ತಿರುವುದು ರಾಜಕೀಯ ವಾಗಿ ಶೋಭೆ ತರುವುದಿಲ್ಲ.
ವಾಚ್ ವಿಚಾರವಾಗಿ ಜನಾರ್ದನ ಪೂಜಾರಿ ಯವರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದನ್ನು ವಿವಾದ ಮಾಡುವ ಅಗತ್ಯವಿಲ್ಲ.