ರಾಜ್ಯ ಮಟ್ಟದ ಬ್ಯಾಡ್ಮಿಂಟನ್: ಕಿರಣ್- ಧೃತಿಗೆ ಪ್ರಶಸ್ತಿ
ಉಡುಪಿ, ಮೇ 21: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಪ್ರಕಾಶ್ ಎಂ.ಕೊಡವೂರು ಸ್ಮಾರಕ ಕರ್ನಾಟಕ ರಾಜ್ಯ ಜ್ಯೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ 19ವರ್ಷ ಕೆಳಗಿನ ಬಾಲಕರ ವಿಭಾಗದಲ್ಲಿ ಕಿರಣ್ ಬಿ. ಮತ್ತು ಬಾಲಕಿಯರ ವಿಭಾಗದಲ್ಲಿ ಧೃತಿ ಯತೀಶ್ ಪ್ರಶಸ್ತಿ ಗೆದ್ದು ಕೊಂಡಿದ್ದಾರೆ.
17ವರ್ಷ ಕೆಳಗಿನ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ರಾಜನ್ಸ್ ಬ್ಯಾಡ್ಮಿಂಟನ್ ಅಕಾಡೆಮಿಯ ತೇಜಸ್ ಕಲ್ಲೊಕ್ಕರ್ ತನ್ನ ಎದುರಾಳಿ ಎಸ್ಎಐಯ ಮೋಹಿತ್ ಗೌಡರನ್ನು 21-13, 21-4 ಅಂತರದಿಂದ, ಬಾಲಕಿ ಯರ ಸಿಂಗಲ್ಸ್ನಲ್ಲಿ ಪಿಪಿಬಿಎಯ ಧೃತಿ ಯತೀಶ್ ತನ್ನ ಎದುರಾಳಿ ಪಿಪಿಬಿಎ ಯ ತ್ರೀಶಾ ಹೆಗ್ಡೆ ಅವರನ್ನು 21-16, 16-10 (ನಿವೃತ್ತಿ) ಅಂಕಗಳೊಂದಿಗೆ ಮತ್ತು ಬಾಲಕ ಡಬಲ್ಸ್ನಲ್ಲಿ ಡಬ್ಲುಪಿಬಿಎಯ ಭಾರ್ಗವ ಎಸ್. ಮತ್ತು ಐ ಸ್ಪೋರ್ಟ್ಸ್ನ ನಿತಿನ್ ಎಚ್.ವಿ. ಅವರು ಐ ಸ್ಪೋರ್ಟ್ಸ್ನ ಚಿರಂಜೀವಿ ರೆಡ್ಡಿ ಮತ್ತು ಜಿಂಕೆ ಪಾರ್ಕ್ನ ಸುಹಾಸ್ ವಿ. ಅವರನ್ನು 21-12, 21-18 ಅಂತರ ದಿಂದ ಮಣಿಸಿದರು.
19ವರ್ಷ ಕೆಳಗಿನ ಬಾಲಕರ ವಿಭಾಗ ಫೈನಲ್ನಲ್ಲಿ ಡಬ್ಲುಪಿಬಿಎಯ ಕಿರಣ್ ಬಿ. ಅವರು ಡಬ್ಲುಪಿಬಿಎಯ ಮಯೂರೇಶ್ ಜನ್ಪಂಡಿತ್ ಅವರನ್ನು 21-15, 21-13 ನೇರ ಸೆಟ್ಗಳಲ್ಲಿ, ಬಾಲಕಿಯರ ಸಿಂಗಲ್ಸ್ನಲ್ಲಿ ಧೃತಿ ಯತೀಶ್ ತನ್ನ ಎದುರಾಳಿ ಐ ಸ್ಪೋರ್ಟ್ಸ್ನ ಕೀರ್ತನಾ ಪಿ. ಅವರನ್ನು 21-19, 20-22, 9-6(ನಿವೃತ್ತಿ) ಅಂತರದಲ್ಲಿ ಸೋಲಿಸಿತು.
19ವರ್ಷ ಬಾಲಕರ ಡಬಲ್ಸ್ನಲ್ಲಿ ಗಣೇಶ್ ವಿಠಲ್ಜೀ ಮತ್ತು ಸಾಯಿ ಪ್ರತೀಕ್ ಜೋಡಿಯು ಅಭಿ ಅಮುದನ್ ಮತ್ತು ಕಿರಣ್ ಬಿ. ಜೋಡಿಯನ್ನು 21-12, 21-17 ಅಂತರದಲ್ಲಿ ಮಣಿಸಿತು.
ಮಿಕ್ಸೆಡ್ ಡಬಲ್ಸ್ನಲ್ಲಿ ಅಭಿ ಅಮುದನ್ ಮತ್ತು ರಂಜನಿ ಹೆಗ್ಡೆ ಪ್ರಶಸ್ತಿ ಗೆದ್ದುಕೊಂಡರು.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಎಸ್ಸಿಡಿಸಿಸಿಯ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಭಾಗವಹಿಸಿದ್ದರು.
ಅಸೋಸಿಯೇಶನ್ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ವೈ.ಸುಧೀರ್ ಕುಮಾರ್, ಕೋಶಾಧಿಕಾರಿ ಕಾಶಿರಾಮ್ ಪೈ ಮೊದಲಾದವರು ಉಪಸ್ಥಿತರಿದ್ದರು.