ತಲಪಾಡಿ ಟೋಲ್ ಬೂತ್ ನಲ್ಲಿ ಕಾರು ತಡೆದು ಮಿಲ್ ಮಾಲಕನಿಗೆ ಹಲ್ಲೆ
ಮಂಜೇಶ್ವರ, ಮೇ 23: ತಲಪಾಡಿ ಟೋಲ್ ಬೂತ್ನಲ್ಲಿ ಕಾರು ತಡೆದು ಮಿಲ್ ಮಾಲಕನಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದ ಘಟನೆ ಸಂಭವಿಸಿದೆ.
ವಿಷಯ ತಿಳಿದು ಜನರು ಸೇರುತ್ತಿದ್ದಂತೆ ಸ್ಥಳದಲ್ಲಿ ಸಂಘರ್ಷಾವಸ್ಥೆ ಸೃಷ್ಟಿಯಾಯಿತು. ಮಂಜೇಶ್ವರ, ಉಳ್ಳಾಲ ಠಾಣೆಗಳ ಪೊಲೀಸರು ತಲುಪಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಮಂಗಳೂರಿನಲ್ಲಿ ಮಿಲ್ ಮಾಲಕನಾದ ಮಂಜೇಶ್ವರ ತೂಮಿನಾಡು ನಿವಾಸಿ ಅನ್ಸಾರ್(28) ಎಂಬವರ ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಹೋದರಿಯ ವಿವಾಹದಲ್ಲಿ ಭಾಗವಹಿಸಲು ತಲುಪಿದ ಅತಿಥಿಗಳನ್ನು ತಲಪಾಡಿಗೆ ತಲುಪಿಸಿ ಮರಳಿ ಮನೆಗೆ ಮರಳುತ್ತಿದ್ದಾಗ ಆಕ್ರಮಣವುಂಟಾಗಿದೆ. ಕಾರು ತಡೆದು ನಿಲ್ಲಿಸಿ ಟೋಲ್ಬೂತ್ ಮಾಲಕರು ಸುಂಕ ಕೇಳಿದ್ದಾರೆ. ಈ ಹಿಂದೆ ನಡೆಸಿದ ಒಪ್ಪಂದ ಪ್ರಕಾರ ಮಂಜೇಶ್ವರ ಹಾಗೂ ಪರಿಸರ ವಾಹನಗಳನ್ನು ಟೋಲ್ ನಿಂದ ಹೊರತುಪಡಿಸಿರುವುದಾಗಿ ಅನ್ಸಾರ್ ತಿಳಿಸಿದ್ದಾರೆ. ಇದರಿಂದ ಕುಪಿತರಾದ ಟೋಲ್ ಬೂತ್ ನೌಕರರು ಹಾಗೂ ಅಲ್ಲೇ ಸೇರಿದ್ದ ಗೂಂಡಾ ತಂಡವೊಂದು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದರೆಂದು ಅನ್ಸಾರ್ ಆರೋಪಿಸಿದ್ದಾರೆ.
ಟೋಲ್ ಬೂತ್ ನಲ್ಲಿ ನಿರಂತರ ಪ್ರಯಾಣಿಕರ ಮೇಲೆ ಹಲ್ಲೆ ನಡೆಯುತ್ತಿದ್ದು ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.