ಕೋಡಿಂಬಾಡಿ: "ನಂಙಳೆ ಜಮಾಅತ್" ಅಭಿಯಾನಕ್ಕೆ ಚಾಲನೆ
ಪುತ್ತೂರು, ಮೇ 23: ಕೋಡಿಂಬಾಡಿ ನೂರುಲ್ ಹುದಾ ಜುಮಾ ಮಸೀದಿ ಯ ಜಮಾಅತ್ ವ್ಯಾಪ್ತಿಯ ಎಲ್ಲ ಕುಟುಂಬಗಳ ಮಾಹಿತಿ ಸಂಗ್ರಹಕ್ಕಾಗಿ ಮನೆ ಮನೆ ಭೇಟಿ ಕಾರ್ಯಕ್ರಮ "ನಂಙಳೆ ಜಮಾಅತ್ ಅಭಿಯಾನ"ಕ್ಕೆ ಚಾಲನೆ ಹಾಗೂ ಪವಿತ್ರ ರಮಝಾನ್ ಗೆ ಸ್ವಾಗತ ಕಾರ್ಯಕ್ರಮ ನೂರುಲ್ ಹುದಾ ಯೂತ್ ಫ್ರೆಂಡ್ಸ್ ಕೋಡಿಂಬಾಡಿ ಇದರ ವತಿಯಿಂದ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಕೆ. ಎಂ.ಎ.ಕೊಡುಂಗಾಯಿ, ಕೆಡುಕು ಮುಕ್ತ ಒಳಿತಿನ ಬದುಕಿಗೆ ಸ್ಪೂರ್ತಿ ನೀಡುವ ಪವಿತ್ರ ರಮಝಾನ್ ತಿಂಗಳನ್ನು ಸ್ವಾಗತಿಸುವ ಕಾರ್ಯಕ್ರಮದೊಂದಿಗೆ ಜಮಾಅತ್ ನ ಪ್ರತಿ ಮನೆಗೆ ಭೇಟಿ ನೀಡಿ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾಹಿತಿಯನ್ನು ಸಂಗ್ರಹಿಸುವ ಗುರಿಯೊಂದಿಗೆ ನಡೆಸಲಾಗುವ "ನಂಙಳೆ ಜಮಾಅತ್ "ಅಭಿಯಾನವು ಶ್ಲಾಘನೀಯವಾಗಿದೆ ಎಂದು ಹೇಳಿದರು..
ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಯೂಸುಫ್ ಕರ್ನಾಟಕ ವಹಿಸಿದ್ದರು.
ಸಮಾರಂಭದಲ್ಲಿ ಜಮಾಅತ್ ಕೋಶಾಧಿಕಾರಿ ಕೆ. ಮುಹಮ್ಮದ್ ಕೋಡಿಂಬಾಡಿ, ಯೂತ್ ಫ್ರೆಂಡ್ಸ್ ಅಧ್ಯಕ್ಷ ಸಿದ್ದೀಕ್ ಶಾಂತಿನಗರ, ಉಪಾಧ್ಯಕ್ಷ ಮುದಸ್ಸಿರ್ ಕೋಡಿಂಬಾಡಿ, ಕೋಶಾಧಿಕಾರಿ ಅಬೂಬಕ್ಕರ್ ಸುಲ್ತಾನ್, ಉದ್ಯಮಿ ಹಮೀದ್ ಪರನೀರು ಮೊದಲಾದವರು ಉಪಸ್ಥಿತರಿದ್ದರು.
ಮಿತ್ತೂರು ಕೆ.ಜಿ.ಎನ್. ಹೈಸ್ಕೂಲ್ ಅಧ್ಯಾಪಕ ನೌಫಲ್ ಮಾಸ್ಟರ್ ಆತೂರು ಸ್ವಾಗತಿಸಿದರು. ಯೂತ್ ಫ್ರೆಂಡ್ಸ್ ಕಾರ್ಯದರ್ಶಿ ಮುಸವ್ವಿರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಇಕ್ಬಾಲ್ ಕೋಡಿಂಬಾಡಿ, ನಝೀರ್ ಶಾಂತಿನಗರ, ಅಬ್ದುಲ್ ರಹಿಮಾನ್, ಸಮದ್, ಸಮೀರ್ ಸುಲ್ತಾನ್, ಸಲೀಂ, ಅಶ್ರಫ್, ಶಾಕಿರ್ ಹಾಗೂ ಸಫ್ವಾನ್ ಸಮೀಕ್ಷಾ ಅಭಿಯಾನದಲ್ಲಿ ಸಹಕರಿಸಿದರು.