ಅಭಿವೃದ್ಧಿ ಕಾರ್ಯಗಳ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು
ಬಂಟ್ವಾಳ, ಮೇ 28: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ಅಳವಡಿಸಿರುವ ಬ್ಯಾನರನ್ನು ಕಿಡಿಗೇಡಿಗಳು ರಾತೋರಾತ್ರಿ ಹರಿದು ಹಾಕಿರುವ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸಜಿಪಮೂಡ ಹಾಗೂ ಸಜಿಪಮುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಈ ಇಬ್ಬರು ಜನಪ್ರತಿನಿಧಿಗಳು ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು, ಈ ಬಗ್ಗೆ ಎರಡೂ ಗ್ರಾಪಂಗಳ ಅಧ್ಯಕ್ಷರು ಶುಭ ಕೋರುವ ಬ್ಯಾನರ್ ಶನಿವಾರ ಬೆಳಗ್ಗೆ ಹಾಕಿದ್ದರು. ಅದೇ ದಿನ ರಾತ್ರಿ ಬ್ಯಾನರನ್ನು ಹರಿದು ಹಾಕಲಾಗಿದೆ.
ಈ ಬಗ್ಗೆ ಸಜಿಪಮೂಡ ಗ್ರಾಪಂ ಅಧ್ಯಕ್ಷ ಗಣಪತಿ ಭಟ್ ಹಾಗೂ ಸಜಿಪಮುನ್ನೂರು ಗ್ರಾಪಂ ಅಧ್ಯಕ್ಷ ಶರೀಫ್ ನಂದಾವರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆಯೂ ಇದೇ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬ್ಯಾನರ್ ರನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಬಗ್ಗೆಯೂ ಪೊಲೀಸ್ ದೂರು ನೀಡಲಾಗಿತ್ತು.
Next Story