ನಿಷೇಧಾಜ್ಞೆಯ ನಡುವೆಯೇ ಕಲ್ಲಡ್ಕದಲ್ಲಿ ವಾಹನ ಜಾಥಾ
ಹನುಮಾನ್ ವಿಗ್ರಹ ಪ್ರತಿಷ್ಠಾಪನೆಯಂಗವಾಗಿ ಉಪ್ಪಿನಂಗಡಿಯಿಂದ ಕಲ್ಲಡ್ಕಕ್ಕೆ ರ್ಯಾಲಿ
# ಬಿಗಿ ಪೊಲೀಸ್ ಬಂದೋಬಸ್ತ್
ಬಂಟ್ವಾಳ, ಮೇ 30: ಕಲ್ಲಡ್ಕದ ಶ್ರೀರಾಮ ಮಂದಿರದಲ್ಲಿ ಹನುಮಾನ್ ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ಉಪ್ಪಿನಂಗಡಿಯಿಂದ ಕಲ್ಲಡ್ಕಕ್ಕೆ ವಾಹನ ಜಾಥಾವೊಂದನ್ನು ಆಯೋಜಿಸಲಾಗಿತ್ತು.
ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞಾ ಜಾರಿಯಲ್ಲಿದ್ದರೂ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ನೇತೃತ್ವದಲ್ಲಿ ನಡೆಯುತ್ತಿರುವ ನಡೆದ ಜಾಥಾವು ಇದೀಗ ಕಲ್ಲಡ್ಕ ತಲುಪಿದೆ. ಜಾಥಾದ ಹಿನ್ನೆಲೆಯಲ್ಲಿ ಕಲ್ಲಡ್ಕದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕಲ್ಲಡ್ಕದಲ್ಲಿ ಮೇ 26ರಂದು ಚೂರಿ ಇರಿತ ಹಾಗೂ 27ರಂದು ಬಂದ್ ಆಚರಿಸಲ್ಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಟ್ವಾಳ ತಾಲೂಕಿನಾದ್ಯಂತ ಜೂನ್ 2ರವರೆಗೆ ನಿಷೇಧಾಜ್ಞೆ ವಿಧಿಸಿ ಮಂಗಳೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ 3 ಮಂದಿಗಿಂತ ಹೆಚ್ಚು ಜನರು ಗುಂಪು ಸೇರುವುದು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಈ ಜಾಥಾಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ಆದರೂ ಜಾಥಾ ನಿರಾಂತಕವಾಗಿ ನಡೆದಿದ್ದು, ಕಲ್ಲಡ್ಕದೆಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.