ಸಿಇಟಿ ಟಾಪರ್ ಎಕ್ಸ್ಪರ್ಟ್ ಕಾಲೇಜಿನ ಪ್ರತೀಕ್ಗೆ ಇಂಜಿನಿಯರ್ ಆಗುವ ಗುರಿ
ಪ್ರಥಮ ರ್ಯಾಂಕ್ ನಿರೀಕ್ಷಿಸಿರಲಿಲ್ಲ!
ಮಂಗಳೂರು, ಮೇ 30: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ನಾಯಕ್ ಇಂಜಿನಿಯರಿಂಗ್ನಲ್ಲಿ ಪ್ರಥಮ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಮಂಗಳೂರು ನಿವಾಸಿ ಶ್ರೀಕಾಂತ್ ನಾಯಕ್ ಹಾಗೂ ಸಂಗೀತಾ ಎಸ್. ನಾಯಕ್ ದಂಪತಿ ಪುತ್ರನಾಗಿರುವ ಪ್ರತೀಕ್ ಜೆಇಇ ಮೇನ್ಸ್ ಪರೀಕ್ಷೆಯಲ್ಲೂ 1300ನೆ ರ್ಯಾಂಕ್ ಗಳಿಸಿದ್ದು, ಮುಂದೆ ಕಂಪ್ಯೂಟರ್ ಸಾಯನ್ಸ್ನಲ್ಲಿ ಇಂಜಿನಿಯರಿಂಗ್ ಮಾಡಲು ಆಸಕ್ತಿ ಹೊಂದಿದ್ದಾರೆ.
‘‘ಆತ ಸಿಇಟಿಯಲ್ಲಿ 100ರೊಳಗೆ ರ್ಯಾಂಕ್ ಪಡೆಯಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಪ್ರಥಮ ರ್ಯಾಂಕ್ ಬಂದಿರುವುದು ನಮಗೆ ಅಚ್ಚರಿಯ ಜತೆಗೆ ಸಂತಸವನ್ನು ತಂದಿದೆ’’ ಎಂದು ಪ್ರತೀಕ್ ತಂದೆ ಶ್ರೀಕಾಂತ್ ನಾಯಕ್ ‘ವಾರ್ತಾಭಾರತಿ’ ಜತೆ ಪ್ರತಿಕ್ರಿಯಿಸಿದ್ದಾರೆ.
‘‘ಎಕ್ಸ್ಪರ್ಟ್ ಪಿಯು ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದಲೇ ಆತ ಈ ಸಾಧನೆ ಮಾಡಲು ಸಾಧ್ಯವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆತನಿಗೆ ಒಟ್ಟು 578 ಅಂಕಗಳು ಲಭಿಸಿತ್ತು. ರಸಾಯನಶಾಸ್ತ್ರ, ಗಣಿತ ಹಾಗೂ ಸಂಖ್ಯಾಗಣಿತದಲ್ಲಿ ಆತ ತಲಾ 100 ಅಂಕಗಳನ್ನು ಗಳಿಸಿದ್ದ. ಉಳಿದಂತೆ ಭೌತಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದಿದ್ದು, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಸ್ವಲ್ಪ ಅಂಕಗಳು ಕಡಿಮೆ ಬಂದಿವೆ. ಇದಕ್ಕಾಗಿ ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿದೆ’’ ಎಂದು ಶ್ರೀಕಾಂತ್ ನಾಯಕ್ ತಿಳಿಸಿದ್ದಾರೆ.