ಸಿಡಿಲಿನಿಂದ ಮನೆಗಳಿಗೆ ಹಾನಿ
ಉಡುಪಿ, ಜೂ. 6: ಮಳೆಯೊಂದಿಗೆ ಸಿಡಿಲು ಬಡಿದು ಮೂರು ಮನೆಗಳಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಜೂ. 5 ರಂದು ರಾತ್ರಿ ನಡೆದಿದೆ.
ಕಾಪುವಿನ ಮಲ್ಲಾರು ಗ್ರಾಮದ ಅಬ್ದುಲ್ ಹಮೀದ್ ಎಂಬವರ ಮನೆಗೆ ನಿನ್ನೆ ರಾತ್ರಿ ಸಿಡಿಲು ಬಡಿದು ಮನೆಯ ಇಲೆಕ್ಟ್ರಾನಿಕ್ಸ್ ಸಾಧನಗಳೆಲ್ಲವೂ ಸುಟ್ಟು ಹೋಗಿವೆ. ಗೋಡೆ ಸಹ ಬಿರುಕು ಬಿಟ್ಟಿದ್ದು ಒಂದು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ಕಮಲ ಆಚಾರ್ತಿ ಹಾಗೂ ಸರೋಜಿನಿ ಎಂಬವರ ಮನೆಗಳಿಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದೆ. ಇದರಿಂದ ತಲಾ 8,000 ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿಗೆ ಮಾಹಿತಿ ಬಂದಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 28ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 28.9ಮಿ.ಮೀ., ಕುಂದಾಪುರದಲ್ಲಿ 18.7 ಹಾಗೂ ಕಾರ್ಕಳದಲ್ಲಿ 36.3ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜೂನ್ ಮೊದಲ ವಾರ ಕಳೆದರೂ ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದರಿಂದ ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗುವ ಭೀತಿ ಎದುರಾಗಿದೆ.