ಎರಡು ಗಂಟೆಗಳಲ್ಲಿ ತಾತ್ಕಾಲಿಕ ಬಸ್ ತಂಗುದಾಣ ನಿರ್ಮಿಸಿದ ಶಾಸಕ ಮೊಯ್ದಿನ್ ಬಾವ
ಮಂಗಳೂರು, ಜೂ. 10: ಬಸ್ ನಿಲ್ದಾಣ ಇಲ್ಲದೆ ಸಾರ್ವಜನಿಕರು ಬಸ್ಸಿಗಾಗಿ ಮಳೆಯಲ್ಲೇ ನೆನೆಯುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಶಾಸಕ ಮೊಯ್ದಿನ್ ಬಾವಾ ತಮ್ಮ ಸ್ವಂತ ಖರ್ಚಿನಲ್ಲಿಯೇ ಎರಡು ಗಂಟೆಗಳೊಳಗೆ ಬಸ್ ತಂಗುದಾಣ ನಿರ್ಮಿಸಿ ಕೊಟ್ಟರು.
ಸುರತ್ಕಲ್ ಪ್ರದೇಶದಲ್ಲಿ ಶನಿವಾರ ತೀವ್ರ ಮಳೆ ಸುರಿಯುತ್ತಿದ್ದು, ಶಾಸಕ ಮೊದಿನ್ ಬಾವಾ ಸುರತ್ಕಲ್ ಮಾರ್ಕೆಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಮಾರ್ಕೆಟ್ ಮುಂಭಾಗ ಕೃಷ್ಣಾಪುರ ರಸ್ತೆಯಲ್ಲಿ ಸಾಕಷ್ಟು ಪ್ರಯಾಣಿಕರು ಬಸ್ ಗಾಗಿ ಯಾವುದೇ ಆಸರೆಯಿಲ್ಲದೆ ಮಳೆಯಲ್ಲಿಯೇ ನಿಂತಿರುವುದನ್ನು ಕಂಡು, ತಕ್ಷಣ ಕಾರ್ಯಪ್ರವೃತ್ತರಾದ ಶಾಸಕ, ತಾತ್ಕಾಲಿಕ ಬಸ್ ತಂಗುದಾಣಕ್ಕೆ ಅಗತ್ಯ ಸಾಮಗ್ರಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ತರಿಸಿ, ಅಗತ್ಯ ಕೆಲಸಗಾರರನ್ನೂ ವ್ಯವಸ್ಥೆ ಮಾಡಿ ಬಸ್ ತಂಗುದಾಣ ಸಿದ್ಧಗೊಳಿಸಿ, ಉದ್ಘಾಟನೆಯನ್ನೂ ನೆರವೇರಿಸಿದರು.
ಆ ಮೂಲಕ ಮಳೆಯಲ್ಲಿಯೇ ಬಸ್ಸಿಗಾಗಿ ಕಾಯುತ್ತಿದ್ದ ಸಾರ್ವಜನಿಕರ ಸಂಕಷ್ಟಕ್ಕೆ ಶಾಸಕರು ಪರಿಹಾರ ನೀಡಿದರು. ಶಾಸಕರ ಈ ಕ್ಷಿಪ್ರ ಸ್ಪಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ಸ್ಥಳೀಯ ರಿಕ್ಷಾ ಚಾಲಕರೂ ಶಾಸಕರಿಗೆ ಹೂಹಾರ ಹಾಕಿ ಸಂತಸ ವ್ಯಕ್ತಪಡಿಸಿದರು. ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.