ಸಚಿವ ರಮಾನಾಥ ರೈಯನ್ನು ಸಂಪುಟದಿಂದ ವಜಾ ಮಾಡಿ: ಸಂಸದ ನಳಿನ್
ಅಲ್ಪಸಂಖ್ಯಾತರು-ಪೊಲೀಸ್ ಇಲಾಖೆಯ ಮಧ್ಯೆ ಎತ್ತಿಕಟ್ಟಲು ಕಾಂಗ್ರೆಸ್ ಸಂಚು
ಮಂಗಳೂರು, ಜೂ.18: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತನ್ನ ಬಳಿ ಕರೆಯಿಸಿಕೊಂಡು ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ಮುಖಂಡ ರಾಜೇಶ್ ನಾಯ್ಕ ಉಳೆಪಾಡಿ ಗುತ್ತು ಅವರನ್ನು ಬಂಧಿಸಲು ಸೂಚಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಮಾನಾಥ ರೈಯನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದ ಕದ್ರಿಯ ಪ್ರವಾಸಿ ಬಂಗಲೆಯಲ್ಲಿ ರವಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈ ಅಧಿಕಾರ ದುರುಪಯೋಗ ಪಡಿಸಿರುವುದು ಹೊಸದೇನೂ ಅಲ್ಲ. ಆದರೆ, ನಿನ್ನೆ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಲು ಮುಂದಾಗಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಜಗಜ್ಜಾಹಿರಾಗಿದೆ. ಕಲ್ಲಡ್ಕ ಸಹಿತ ಜಿಲ್ಲೆಯಲ್ಲಿ ನಡೆಯುವಂತಹ ಕೋಮುಸೂಕ್ಷ್ಮ ಪ್ರಕರಣಗಳಿಗೆ ಕಾಂಗ್ರೆಸ್ ಮತ್ತು ಸಚಿವ ರಮಾನಾಥ ರೈ ನೇರ ಕಾರಣ ಎಂದರಲ್ಲದೆ, ಚುನಾವಣೆ ಸಮೀಪಿಸುತ್ತಿರುವಾಗ ನಡೆಸುತ್ತಿರುವ ಪೂರ್ವ ತಯಾರಿ ಇದೆಂಬುದು ಸಾಕ್ಷಿಯಾಗಿದೆ. ಜಿಲ್ಲೆಯ ಅಲ್ಪಸಂಖ್ಯಾತರು ಮತ್ತು ಪೊಲೀಸ್ ಇಲಾಖೆಯನ್ನು ಎತ್ತಿಕಟ್ಟುವಂತಹ ಕೆಲಸವನ್ನು ರೈ ಸಹಿತ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಎಸ್ಪಿಯನ್ನು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕೂರಿಸಿಕೊಂಡು ಇದು ಮಂಡ್ಯ ಅಲ್ಲ, ಕಲ್ಲಡ್ಕ ಪ್ರಭಾಕರ ಭಟ್ರನ್ನು ಬಂಧಿಸಿ, ಏನೂ ಆಗುವುದಿಲ್ಲ ಎನ್ನುತ್ತಾರೆ. ಆ ಮೂಲಕ ಪೊಲೀಸ್ ಇಲಾಖೆಯ ಮಧ್ಯೆ ಹಸ್ತಕ್ಷೇಪ ನಡೆಸಿದ್ದಾರೆ. ಅಷ್ಟೇ ಅಲ್ಲ, ಒಂದು ಸಮುದಾಯವನ್ನು ತೃಪ್ತಿಪಡಿಸುವ ಮತ್ತು ಇನ್ನೊಂದು ಸಮುದಾಯವನ್ನು ಗುರಿಯಾಗಿಸುವ ಮೂಲಕ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ಹೂಡುತ್ತಿದ್ದಾರೆ. 2008ರಿಂದ 2013ರವರೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಕೋಮುಗಲಭೆ ನಡೆದಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಕೋಮುಗಲಭೆ ಶುರುವಾಯಿತು. ಪ್ರಶಾಂತ್ ಪೂಜಾರಿ ಕೊಲೆ, ಪಂಜಿಮೊಗರು ತಾಯಿ-ಮಗಳ ಕೊಲೆ, ಉಪ್ಪಿನಂಗಡಿಯ ಹೀರೇಬಂಡಾಡಿಯ ಪುಷ್ಪಲತಾ ಎಂಬಾಕೆಯ ಕೊಲೆ ಹೀಗೆ ಜಿಲ್ಲೆಯಲ್ಲಿ ಸಾಲು ಸಾಲು ಕೊಲೆಗಳು ನಡೆದಿದೆ. ಆ ಬಗ್ಗೆ ವೌನ ತಾಳಿರುವ ಸಚಿವ ರೈ ಕಲ್ಲಡ್ಕ ಪ್ರಕರಣಕ್ಕೆ ಸಂಬಂಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರರನ್ನು ಬಂಧಿಸಲು ಸೂಚಿಸಿರುವುದು ಎಷ್ಟು ಸರಿ ಎಂದು ನಳಿನ್ ಪ್ರಶ್ನಿಸಿದರು.
ಆರೋಪಿಗಳನ್ನು ಬಂಧಿಸಬೇಡಿ ಎಂದು ನಾವು ಆಗ್ರಹಿಸುತ್ತಿಲ್ಲ. ಆದರೆ ಅಮಾಯಕರ ಬಂಧನವಾಗಬಾರದು. ಅದು ಯಾವುದೇ ಸಮುದಾಯವಾದರು ಸರಿ ಎಂದ ನಳಿನ್, ಇತ್ತೀಚೆಗೆ ನಡೆದ ಜಲೀಲ್ ಕರೋಪಾಡಿಯ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನೇ ಭಾಗಿಯಾಗಿದ್ದಾನೆ ಎಂದು ಸ್ವತ: ಜಲೀಲ್ನ ತಂದೆ ಉಸ್ಮಾನ್ ಆರೋಪಿಸಿದ್ದಾರೆ. ಆದರೆ, ಸಚಿವ ರೈ ಆತನನ್ನು ಬಂಧಿಸಲು ಸೂಚನೆ ನೀಡದಿರುವುದು ವಿಪರ್ಯಾಸ ಎಂದರು.
ಕೇರಳದ ಕೆಲವು ಶಕ್ತಿಗಳು ದ.ಕ.ಜಿಲ್ಲೆಗೆ ನುಸುಳಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸುವ ಬದಲು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ರೈಯ ಹೀನ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಇದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಪೊಲೀಸ್ ಇಲಾಖೆಯ ವೈಫಲ್ಯವಿದ್ದಿದ್ದರೆ ಪ್ರಗತಿ ಪರಿಶೀಲನೆ ಮಾಡುವ ಬದಲು ಜಿಲ್ಲಾ ಎಸ್ಪಿಯನ್ನು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖ ಕೂರಿಸಿ ಪಾಠ ಮಾಡಿರುವುದು ಸರಿಯಲ್ಲ. ಜಿಲ್ಲೆಯ ಒಬ್ಬ ಸಚಿವ ಆರೆಸ್ಸೆಸ್ನವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದರೆ, ಇನ್ನೊಬ್ಬ ಸಚಿವರು ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನೇತ್ರಾವತಿ ಹೋರಾಟಗಾರರನ್ನು ಬಂಧಿಸಿ ಎನ್ನುತ್ತಿದ್ದಾರೆ. ಹಾಗಾಗಿ ಇವರು ತಕ್ಷಣ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ನಿಲ್ಲಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜೇಶ್ ನಾಯ್ಕಿ ಉಳಿಪಾಡಿಗುತ್ತು, ಉಮನಾಥ ಕೋಟ್ಯಾನ್ ಮತ್ತಿತರರಿದ್ದರು.