ರಮಾನಾಥ ರೈಯಿಂದ ಕಾಂಗ್ರೆಸ್ನ ಶವಪೆಟ್ಟಿಗೆಗೆ ಕೊನೆಯ ಮೊಳೆ : ಶ್ಯಾಮ ಹೆಗ್ಡೆ
ಮೂಡುಬಿದಿರೆ,ಜೂ.19 : "ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಉಸ್ತುವಾರಿ ಸಚಿವ ರಮಾನಾಥ ರೈಯವರೇ ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅರಣ್ಯ ಮೃಗಗಳಿಗಿಂತಲೂ ಕೀಳು ವರ್ತನೆ ತೋರುತ್ತಿರುವ ರೈಯವರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಶವಪೆಟ್ಟಿಗೆಗೆ ಕೊನೇಯ ಮೊಳೆ ಹೊಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗಾದ ಹೀನಾಯ ಸೋಲು ಜಿಲ್ಲೆಯಲ್ಲೂ ಮರುಕಳಿಸಲಿದೆ" ಎಂದು ವಿಹಿಂಪ ಮುಖಂಡ ಶ್ಯಾಮ ಹೆಗ್ಡೆಹೇಳಿದರು.
ಅವರು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ನಿಂದಿಸಿ ಬಂಧಿಸಲು ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಒತ್ತಡ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ವರ್ತನೆಯನ್ನು ಖಂಡಿಸಿ ವಿ.ಹಿಂ.ಪ ಮತ್ತು ಬಜರಂಗದಳ ವತಿಯಿಂದ ಸೋಮವಾರ ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನ್ಯಾಯವಾದಿ ಕೆ.ಆರ್ ಪಂಡಿತ್ ಮಾತನಾಡಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಲು ಸಾಧ್ಯವಿಲ್ಲ.ಅಂತಹ ದುಸ್ಸಹಾಸಕ್ಕೆ ರಮಾನಾಥ ರೈ ಕೈ ಹಾಕಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮುಖಂಡರಾದ ಕೆ.ಪಿ ಜಗದೀಶ ಅಧಿಕಾರಿ, ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ವಾಸುದೇವ ಭಟ್, ಬೆಳುವಾಯಿ ಭಾಸ್ಕರ ಆಚಾರ್ಯ, ಶ್ರೀನಾಥ್ ಸುವರ್ಣ, ಭರತ್ ಶೆಟ್ಟಿ, ಸಮಿತ್ರಾಜ್ ದರೆಗುಡ್ಡೆ, ಸೋಮನಾಥ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ ಮತ್ತಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.