ರಮಝಾನ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ
ಭಟ್ಕಳ,ಜೂ.20: ತನ್ನ ಅವಧಿಯಲ್ಲಿ ಇಲ್ಲಿಯ ತನಕ ಭಟ್ಕಳದಲ್ಲಿ ನಡೆದ ಎಲ್ಲ ಹಬ್ಬಗಳೂ ಅತ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ಹೆಚ್ಚು ರಿ ಎಸ್.ಪಿ. ದೇವರಾಜು ಹೇಳಿದರು.
ಅವರು ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಎರ್ಪಡಿಸಲಾಗಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಯಾರೂ ಕೂಡಾ ವದಂತಿಗಳಿಗೆ ಕಿವಿಗೊಡಬಾರದು, ಯಾವುದೇ ರೀತಿಯ ವದಂತಿಗಳಿದ್ದರೂ ಕೂಡಾ ತಕ್ಷಣ ಪೊಲೀಸ್ ಇಲಾಖೆ, ಕಂದಾಯ ಇಲಾಖೆಗಳ ಹಿರಿಯ ಅಧಿಕಾರಿಗಳಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ಕೋರಿದ ಅವರು ಯಾವುದೇ ಸಮಸ್ಯೆ ಸೃಷ್ಟಿಯಾಗಲು ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳುವಂತೆ ನಾಗರೀಕರಿಗೆ ಕರೆ ನೀಡಿದರು. ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ರಮಝಾನ್ ಮಾರ್ಕೆಟ್ನಲ್ಲಿ ಕೂಡಾ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಪೊಲೀಸರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದೂ ಹೇಳಿದರು.
ಉಪಸ್ಥಿತರಿದ್ದ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಮಾತನಾಡಿ ಹಬ್ಬ ಹರಿದಿನಗಳ ಎಲ್ಲರಿಗೂ ಕೂಡಾ ಸಂತಸದ ಕ್ಷಣಗಳು. ಅವುಗಳನ್ನು ಯಾವುದೇ ರೀತಿಯ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ಆಚರಿಸಿಕೊಂಡು ಬರುವಂತೆ ಎಲ್ಲ ಸಮುದಾಯದವರೂ ಕೂಡಾ ಸಹಕರಿಸಬೇಕು ಎಂದು ಕರೆ ನೀಡಿದರು. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳೂ ಕೂಡಾ ಜಾಗೃತ ಸ್ಥಿತಿಯಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು ಎಂದು ಕರೆ ನೀಡಿದರಲ್ಲದೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಡಿ.ವೈ.ಎಸ್.ಪಿ. ಶಿವಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ನೋಡಿಕೊಂಡು ಹಾಲಿ ಬೆಂಗಳೂರಿಗೆ ವರ್ಗವಾಗಿ ಹೋಗುತ್ತಿರುವ ಹೆಚ್ಚುವರಿ ಎಸ್.ಪಿ. ದೇವರಾಜು ಅವರನ್ನು ಅಭಿನಂದಿಸಿದರು.
ಉಪಸ್ಥಿತರಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಡಿ.ಬಿ.ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಂ.ಆರ್.ನಾಯ್ಕ ಮಾತನಾಡಿದರು. ಪುರಸಭಾ ಅಧ್ಯಕ್ಷ ಮುಹಮ್ಮದ್ ಮಟ್ಟಾ ಸಾದಿಕ್, ಮೊಹಮ್ಮದ್ ಫಾರೂಕಿ ಸಾಬ್ ಉಪಸ್ಥಿತರಿದ್ದರು.
ಸಿ.ಪಿ.ಐ. ಸುರೇಶ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀ್ದಾರ್ ವಿ.ಎನ್.ಬಾಡಕರ್ ವಂದಿಸಿದರು.