ರಮಾನಾಥ ರೈ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ: ಸಂತೋಷ್ ಕುಮಾರ್ ಶೆಟ್ಟಿ
ಮಂಗಳೂರು, ಜೂ.23: ಕಲ್ಲಡ್ಕ ಪ್ರಭಾಕರ ಭಟ್ ಕಳೆದ 45 ವರ್ಷಗಳಿಂದ ಈ ಜಿಲ್ಲೆಯಲ್ಲಿ ಕೋಮುಭಾವನೆಯನ್ನು ಹರಡುತ್ತಿರುವುದು ಈ ರಾಜ್ಯದ ಜನತೆಗೆ ತಿಳಿದಿದ್ದು, ಈವರೆಗೆ ಅವರ ಮೇಲೆ ಕ್ರಮಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಈ ಕುರಿತು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಮಾತನಾಡಿದ ವಿಚಾರವನ್ನು ತಿರುಚಲಾಗಿದ್ದು, ಅವರು ಪ್ರಭಾಕರ ಭಟ್ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸದ್ದಾರೆಯೇ ವಿನಹ ಯಾವುದೇ ಅವಹೇಳನಕಾರಿಂಾಗಿ ಮಾತನಾಡಿಲ್ಲ. ಜಿಲ್ಲಾ ಉಸ್ತುವಾರಿಸಚಿವರಿಗೆ ಬೆಂಬಲಕ್ಕೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸದಾ ಇದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಜಿಲ್ಲೆಯಲ್ಲಿ ಕೋಮ ಪ್ರಚೋದನೆ ಮಾಡುವ ಶಕ್ತಿಗಳ ಬಗ್ಗೆ ಯಾವುದೇ ಚಕಾರ ಎತ್ತದ ಪಟ್ಟಭದ್ರ ಹಿತಾಸಕ್ತಿಗಳು ಈ ರಾಜ್ಯದ ಹಿರಿಯ ಸಚಿವರೂ ದ.ಕ.ಜಿಲ್ಲೆಯ ಪ್ರಗತಿಯ ಹರಿಕಾರರೂ, ಈ ಜಿಲ್ಲೆ ಕಂಡ ನೈಜ ಜಾತ್ಯಾತೀತ ರಾಜಕಾರಣಿಯೂ ಆಗಿರುವ ಬಿ. ರಮಾನಾಥ ರೈಯವರನ್ನು ತಪ್ಪಿಸತಸ್ಥರನ್ನಾಗಿ ಮಾಡಿರುವುದು ತೀವ್ರ ಖಂಡನೀಯ ಎಂದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಯಲ್ಲಿ ಅಮಾಯಕರನ್ನು ಕೋಮು ಸಂಘರ್ಷಕ್ಕೆ ಪ್ರೋತ್ಸಾಹಿಸುವ ಕಾರ್ಯವನ್ನು ಕಲ್ಲಡ್ಕ ಪ್ರಭಾಕರ ಭಟ್ ಮಾಡುತ್ತಿದ್ದು, ಅವರ ಸಂಬಂಧಿಕರಾಗಲಿ ಈ ಗಲಭೆಯಲ್ಲಿ ಹೆಸರು ಕೇಳಿ ಬರುತ್ತಿಲ್ಲ. ಅಮಾಯಕ ಯುವಕರು ಇವರ ಪ್ರಚೋದನೆಗೆ ಒಳಗಾಗಿ ಜೈಲು ಸೇರುತ್ತಿದ್ದಾರೆ ಎಂದ ಅವರು ಇದಕ್ಕೆ ಬಿಜೆಪಿಯ ಬೆಂಬಲ ಇದೆ. ಕೊಣಾಜೆಯ ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ಕೊಲೆ ಆರೋಪಿಯನ್ನೇ ಪ್ರತಿಭಟನೆಯಲ್ಲಿ ಕುಳ್ಳಿರಿಸಿದ ಕೀರ್ತಿ ಬಿಜೆಪಿಯವರದ್ದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅದ್ಯಕ್ಷ ಮಹಮ್ಮದ್ ಮೋನು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹರ್ಷರಾಜ್ ಮುದ್ಯ, ಜಿಲ್ಲಾ ಹಿಂದುಳಿದ ವಿಭಾಗದ ಕಾರ್ಯದರ್ಶಿ ಪದ್ಮನಾಭ ಗಟ್ಟಿ ಕೆಳಗಿನ ಮನೆ, ಮುಖಂಡರಾದ ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ರವಿರಾಜ್ ಶೆಟ್ಟಿ, ಉಮ್ಮರ್ ಪಜೀರು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮತ್ತಿತರರು ಉಪಸ್ಥಿತರಿದ್ದರು.