ಅಪರಿಚಿತ ವಾಹನ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
ಕೋಟ, ಜೂ.23: ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜೂ.22ರಂದು ರಾತ್ರಿ 9ಗಂಟೆಗೆ ಮಾಬುಕಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಕಾಪು ಉಚ್ಚಿಲದ ಸುಭಾಸ್ ರಸ್ತೆ ನಿವಾಸಿ, ಮೂಲತಃ ಕೋಡಿಯ ಹಸೈನಾರ್(55) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಮೃತರ ಸ್ನೇಹಿತ, ಕಾಪು ನಿವಾಸಿ ತಾಹಿರ್ ಎಂಬವರು ಗಂಭೀರವಾಗಿ ಗಾಯಗೊಂಡು ಮಣಿ ಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ನಲ್ಲಿ ಬಿಸ್ಕಟ್ ಕಂಪೆನಿಯಲ್ಲಿ ಉದೋಗಿಯಾಗಿದ್ದ ಹಸೈನಾರ್ ಮೂರು ತಿಂಗಳ ರಜೆಯಲ್ಲಿ ಇತ್ತೀಚೆಗೆ ಊರಿಗೆ ಬಂದಿ ದ್ದರು. ಕುಂದಾಪುರದ ಎಂ. ಕೋಡಿಯ ಮೂಲ ಮನೆಯಲ್ಲಿ ಹಮ್ಮಿಕೊಳ್ಳಲಾದ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ಇವರು ತನ್ನ ಸ್ನೇಹಿತನ ಜೊತೆ ಮೆಸ್ಟ್ರೋ ದ್ವಿಚಕ್ರ ವಾಹನದಲ್ಲಿ ಹೋಗಿದ್ದು, ರಾತ್ರಿ ಧಾರ್ಮಿಕ ಕಾರ್ಯ ಮುಗಿಸಿ, ಬಳಿಕ ವಾಪಾಸು ಉಚ್ಚಿಲಕ್ಕೆ ಹೊರಟಿದ್ದರು.
ಕುಂದಾಪುರದಿಂದ ಉಚ್ಚಿಲಕ್ಕೆ ಕಡೆಗೆ ಹೋಗುತ್ತಿದ್ದ ಇವರ ವಾಹನಕ್ಕೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿ ಯಾಯಿತು. ಇದರಿಂದ ವಾಹನ ಸಮೇತ ರಸ್ತೆಗೆ ಬಿದ್ದ ಇವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಸೈನಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.