ರಿಫಾಯಿಯ್ಯ ದಫ್ ಕಮಿಟಿ ವತಿಯಿಂದ ಮನೆ ಹಸ್ತಾಂತರ
ಮಂಗಳೂರು,ಜೂ.23: ಸಮಾಜದಲ್ಲಿ ಹಿಂದುಳಿದವರ ಸೇವೆ ಮಾಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವಂತಹ ಕಮಿಟಿ ಕಾರ್ಯ ಶ್ಲಾಘನೀಯ, ಅವರಿಗೆ ದೇವರು ಎಲ್ಲಾ ರೀತಿಯಲ್ಲಿ ಅನುಗ್ರಹಿಸುತ್ತಾನೆ ಎಂದು ಮುಹ್ಯುದ್ದೀನ್ ಜುಮಾ ಮಸೀದಿ ಖತೀರಾದ ನಝೀರ್ ಅಹ್ಮದ್ ಬೋಲ್ ಮೀನಾರ್ ಹೇಳಿದರು.
ಅವರು ಬಜಾಲ್ ಪಕ್ಕಲಡ್ಕದ ರಿಫಾಯಿಯ್ಯ ದಫ್ ಕಮಿಟಿ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಅಬ್ದುಲ್ ಹಮೀದ್ ಅವರಿಗೆ ರಚಿಸಿದ ಮನೆಯಲ್ಲಿ ದುಆ ನೆರವೇರಿಸಿ ಮಾತನಾಡಿದರು.
ರಿಫಾಯಿಯ್ಯ ದಫ್ ಕಮಿಟಿ ಸದಸ್ಯ ಫೈರೋಝ್ ಉಳ್ಳಾಲ್ ಮಾತನಾಡಿ, ರಿಫಾಯಿಯ್ಯ ದಫ್ ಕಮಿಟಿ 13 ವರ್ಷಗಳಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಜಮಾಅತಿನ ಬಡವರ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ ,ಪುಸ್ತಕ ವಿತರಣೆ, ವೈದಕೀಯ ವೆಚ್ಛಗಳನ್ನು ಭರಿಸುವುದು, ಮನೆ ನಿರ್ಮಾಣ, ಮನೆ ದುರಸ್ತಿಯಂತಹ ಕಾರ್ಯ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿದೆ.ಕಮಿಟಿ ಇನ್ನಷ್ಟು ಯೋಜನೆಗಳನ್ನು ನಡೆಸಲು ನಿರ್ಧರಿಸಿದೆ ಎಂದರು.
ಈ ಸಂದರ್ಭ ಪಕ್ಕಲಡ್ಕ ರಿಫಾಯಿಯ್ಯ ದಫ್ ಕಮಿಟಿ ಅಧ್ಯಕ್ಷ ಝೈನುದ್ದೀನ್, ಕಾರ್ಯದರ್ಶಿ ಸಬೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್, ಸದಸ್ಯರಾದ ಅನ್ವಾರ್, ಮುಹಮ್ಮದ್ ಅನ್ಸಾರ್, ಮುಹಮ್ಮದ್ ಅನೀಸ್, ಹುಸೈನ್, ಫೈರೋರ್ ಉಳ್ಳಾಲ್, ಮೋನು, ಹಸನ್ ಹಾಜಿ, ಉದ್ಯಮಿ ಶರೀಫ್, ಉಸ್ಮಾನ್ ಕೋಡಿಮೋಗರ್, ಮನ್ಸೂರು ಕೋಡಿಮೋಗರ್ ಉಪಸ್ಥಿತರಿದ್ದರು.