ಕೇಂದ್ರ ಸರಕಾರವೂ ರೈತರ ಸಾಲ ಮನ್ನಾ ಮಾಡಿಲಿ: ಕೃಷಿ ಸಚಿವ ಕೃಷ್ಣ ಭೈರೇಗೌಡ
ಬೆಳ್ತಂಗಡಿ, ಜೂ. 23:: ರೈತರ ಸಂಕಷ್ಟವನ್ನು ತಾತ್ಸಾರ ಮನೋಭಾವನೆಯಿಂದ ನೋಡುತ್ತಾ ಅನಗತ್ಯ ಟೀಕೆ ಮಾಡದೆ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದಂತೆ, ಕೇಂದ್ರ ಸರಕಾರವೂ ಮನ್ನಾ ಮಾಡಿ ರೈತ ಪರ ತನ್ನ ಬದ್ಧತೆಯನ್ನು ತೋರಿಬೇಕಾಗಿದೆ. ಅದಕ್ಕಾಗಿ ಅವರ ಮೇಲೆ ಒತ್ತಡ ಹೇರಲು ರಾಜ್ಯದ ವಿರೋಧ ಪಕ್ಷದ ನಾಯಕರುಗಳು ಮುಂದಾಗಲಿ ನಾವೂ ಅವರೊಂದಿಗಿರುತ್ತೇವೆ ಎಂದು ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಅವರು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಒಳಬೈಲು ಎಂಬಲ್ಲಿ ಭತ್ತದ ಕೃಷಿಯಲ್ಲಿ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಸ್ವತಃ ಪ್ರಾತ್ಯಕ್ಷಿಕೆ ನಡೆಸಿ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಿಯಾದ ಮಳೆ, ಬೆಳೆ ಇಲ್ಲದೆ ರೈತರು ಮಾಡಿದ ಸಾಲ ತೀರಿಸಲು ಕಷ್ಟಸಾಧ್ಯವಾಗುತ್ತಿದೆ ಎಂದು ಅರಿತ ರಾಜ್ಯ ಸರಕಾರ ಎಂಟು ತಿಂಗಳ ಹಿಂದೆಯೆ ಸಾಲಮನ್ನಾದ ಬಯಕೆಯನ್ನು ವ್ಯಕ್ತಪಡಿಸಿತ್ತು. ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲಮನ್ನಾ ಕೇಂದ್ರ ಸರಕಾರ ಮಾಡದಿರುವ ಹಿನ್ನೆಲೆಯಲ್ಲಿ ಈದೀಗ ರಾಜ್ಯದ 20,22,500 ರೈತರಿಗೆ 8,165 ಕೋಟಿ ರೂ. ಸಾಲ ಮನ್ನಾ ಮಾಡಲಿದ್ದೇವೆ. ಹೀಗಾಗಿ ಪ್ರತಿಪಕ್ಷಗಳು ರೈತ ವಿರೋಧಿ ಹೇಳಿಕೆಗಳನ್ನು ನೀಡದೆ ಕೇಂದ್ರ ಸರಕಾರವೂ ಸಾಲ ಮನ್ನಾ ಮಾಡುವಂತೆ ಆಗ್ರಹಿಸಲಿ. ಈ ಬಗ್ಗೆ ಕೇಂದ್ರಕ್ಕೆ ನಿಯೋಗ ಹೋಗುವುದಾದರೆ ನಾವೂ ಜತೆಗಿರುತ್ತೇವೆ ಎಂದರು.
ಭತ್ತದ ಬೆಳೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಭತ್ತದ ಕೃಷಿಯ ಸಮಗ್ರ ಯಾಂತ್ರೀಕರಣಗೊಳಿಸಲು ಸರಕಾರ ಯೋಜನೆಯನ್ನು ರೂಪಿಸಿದ್ದು ಅದನ್ನು ಕೃಷಿಕರಿಗೆ ಪರಿಚಯಿಸಿ ಅನಿಷ್ಠಾನಗೊಳಿಸುವ ಕಾರ್ಯ ನಡೆಯುತ್ತಿದೆ ಆಮೂಲಕ ಕೃಷಿಯಲ್ಲಿ ಕ್ರಾಂತಿಕಾರಕವಾದ ಬದಲಾವಣೆಯನ್ನು ಕಾಣಲು ಸಾಧ್ಯ ಸಮಗ್ರ ಯಾಂತ್ರೀಕೃತ ಪದ್ಧತಿಯಿಂದ ಎಕರೆಗೆ 14 ಸಾವಿವರ ಉಳಿತಾಯ ಮಾಡಲು ಸಾಧ್ಯವಿದೆ. ಕೃಷಿಯಂತ್ರೋಪಕರಣಗಳನ್ನು ಖರೀದಿಸಲು ಶೇ. 50 ರ ಸಹಾಯಧನವನ್ನು ಸರಕಾರ ನೀಡುತ್ತಿದೆ. ಈ ಸಹಾಯಧನವನ್ನು ಹೆಚ್ಚಿಸಿದ್ದು ಹೆಚ್ಚು ರೈತರಿಗೆ ಒದಗಿಸಲಾಗುತ್ತಿದೆ. ಅಲ್ಲದೆ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದವರಿಗೆ ಅದನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲು ಸರಕಾರ ಕ್ರಮ ಕೈಗೊಂಡಿದ್ದು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಕರಾವಳಿಗೂ ಕೃಷಿಹೊಂಡ: ಕೇವಲ ಬಯಲು ಸೀಮೆಗೆ ಮಾತ್ರ ಇದ್ದ ಕೃಷಿ ಹೊಂಡ ಯೋಜನೆಯನ್ನು ಕೃಷಿ ಭಾಗ್ಯ ಯೋಜನೆಯಡಿ 2017-18ರಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗಿದೆ. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದನೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ರಾಜ್ಯದಲ್ಲಿ 1 ಲಕ್ಷದ 60 ಸಾವಿರ ರೈತರು ಸ್ಪಂದಿಸಿದ್ದು ಇದಕ್ಕಾಗಿ ಸಾವಿರದ ನಾಲ್ಕುನೂರ ಹದಿನಾಲ್ಕು ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಸಚಿವರ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೃಷಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ಒದಗಿಸಿದ್ದಾರಲ್ಲದೆ ಅದರ ಸಮರ್ಪಕ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರಾಜ್ಯದಲ್ಲಿ ಕೃಷಿ ಯಾಂತ್ರೀಕರಣಕ್ಕೆ 455 ಕೋಟಿ ರೂ ಅನುದಾನ ನೀಡಿದ್ದಾರೆ. ಅದರಲ್ಲಿ ದ.ಕ.ಜಿಲ್ಲೆಯಲ್ಲಿ ರೂ. 224 ಕೋಟಿ ರೂ. ಆಗಿದೆ. ಅದರಂತೆ ಹನಿ ನೀರಾವರಿಗೆ ರೂ. 96 ಕೋಟಿ ರೂ. ನೀಡಲಾಗಿದೆ. ಪ್ರಸಕ್ತ ವರ್ಷ ಕೃಷಿಗಾಗಿ ಒದಗಿಸಿರುವ ಅನುದಾನದಲ್ಲಿ ಶೇ. 111 ರಷ್ಟು ಖರ್ಚು ಮಾಡಲಾಗಿದೆ. ಹಿಂದಿನ ಸರಕಾರದಲ್ಲಿ ಬಜೆಟ್ನಲ್ಲಿಟ್ಟ ಅನುದಾನಗಳು ಖರ್ಚು ಆಗದಿರುವುದೇ ಹೆಚ್ಚು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ. ವಸಂತ ಬಂಗೇರ ವಹಿಸಿ ಮಾತನಾಡಿ ರಾಜ್ಯದಲ್ಲಿ ಕೃಷಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದನ್ನು ಪರಿಹರಿಸಲು ಸರಕಾರ ಬದ್ದವಾಗಿದೆ. ಯಾಂತ್ರೀಕೃತ ಕೃಷಿಯಿಂದ ಇದಕ್ಕೆ ಪರಿಹಾರ ಕಾಣಲು ಸಾಧ್ಯವಿದೆ. ರೈತ ಉತ್ತಮ ಬೆಳೆ ಬೆಳೆದರೆ ಮಾತ್ರ ಎಲ್ಲರೂ ನೆಮ್ಮದಿಯ ಬದುಕು ನಡೆಸಬಹುದಾಗಿದೆ. ಕೃಷಿ ಇಲಾಖೆಯ ಕಾರ್ಯಕ್ರಮಗಳೊಂದಿಗೆ ಎಲ್ಲರೂ ಕೈಜೋಡಿಸಿ ಎಂದರು.
ವೇದಿಕೆಯಲ್ಲಿ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಜಿ.ಪಂ ಸದಸ್ಯರುಗಳಾದ ಸೌಮ್ಯಲತಾ, ಮಮತಾ ಶೆಟ್ಟಿ, ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ನಡ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ, ದ.ಕ.ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ಕೃಷಿ ಇಲಾಖೆ ಪ್ರಭಾರ ನಿರ್ದೇಶಕ ಬಿ.ವೈ. ಶ್ರೀನಿವಾಸ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ಉಪಕುಲಪತಿ ಡಾ ಸಿ. ವಾಸುದೇವಪ್ಪ, ಎಸ್.ಕೆ.ಡಿ.ಆರ್.ಡಿ.ಪಿ. ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್.ಎಚ್.ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಸತೀಶ್ ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿ ಪರ ಕೃಷಿಕ ಅಜಿತ್ ಕುಮಾರ್ ಅರಿಗ ಅವರ ಮನೆ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದ ಜಿಲ್ಲಾ ಜಂಟಿ ಕೃಷಿ ಕೆಂಪೇಗೌಡ ಸ್ವಾಗತಿಸಿ, ವಂದಿಸಿದರು. ಜಯಾನಂದ ಹಾಗೂ ನಾರಾಯಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್: ಕೃಷಿ ಯಂತ್ರೋಪಕರಣಗಳನ್ನು ಚಲಾಯಿಸುವುದರಲ್ಲಿ ಪರಿಣತರಾಗಿರುವ ಕೃಷ್ಣಭೈರೇಗೌಡ ಅವರು ತಾವೇ ಸ್ವತಹ ಯಂತ್ರೋಪಕರಣಗಳ ಮೇಲೇರಿ ನಾಟಿ ಮಾಡಿದರು. ಯಾವ ಅಳುಕೂ ಇಲ್ಲದೆ ಗದ್ದೆಗಿಳಿದು ಕೆಸರಿನಲ್ಲಿ ಓಡಾಡಿ ತಾವೂ ಒಬ್ಬ ಕೃಷಿಕ ಎಂಬುದನ್ನು ತೋರಿಸಿದರು.
ಮಣ್ಣು ಆರೋಗ್ಯ ಚೀಟಿ ಬಿಡುಗಡೆ ಮಾಡಿದ ಸಚಿವರು ಇದನ್ನು ಅಟ್ಟದ ಮೇಲಿಡದೆ ಯೋಗ್ಯವಾಗಿ ಉಪಯೋಗಿಸಿದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದುವರಿಗೆ ರಾಜ್ಯದಲ್ಲಿ 78 ಲಕ್ಷ ರೈತರಿಗೆ ಈ ಚೀಟಿಯನ್ನು ನೀಡಲಾಗಿದ್ದು ಎಲ್ಲ ಕೃಷಿಕರಿಗು ಇದನ್ನು ಈ ವರ್ಷದಲ್ಲಿ ವಿತರಿಸಲಾಗುವುದು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭ ಶಾಸಕ ವಸಂತ ಬಂಗೇರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.