ಕಾರು-ಟ್ಯಾಂಕರ್ ಢಿಕ್ಕಿ: ಗಾಯಾಳು ಮೃತ್ಯು
ಮಾಣಿ ಸಮೀಪ ಬುಡೋಳಿಯಲ್ಲಿ ನಡೆದ ಅಪಘಾತ
ಬಂಟ್ವಾಳ, ಜೂ. 25: ಮಾಣಿ ಸಮೀಪದ ಬುಡೋಳಿಯಲ್ಲಿ ರವಿವಾರ ಬೆಳಗ್ಗೆ ತೈಲ ಟ್ಯಾಂಕರ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬಂಟ್ವಾಳ ಕೆಳಗಿಪೇಟೆ ನಿವಾಸಿ ಮೂಸಬ್ಬ(85) ಮೃತಪಟ್ಟವರು.
ಅಪಘಾತದಿಂದ ಗಾಯಗೊಂಡಿದ್ದ ಇವರನ್ನು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಪಘಾತದಿಂದ ಗಾಯಗೊಂಡಿದ್ದ ಮೂಸಬ್ಬರ ಮಗ ಮುಹಮ್ಮದ್(49), ಸೊಸೆ ತಾಹಿರ(39) ಮೊಮ್ಮಕ್ಕಳಾದ ಇರ್ಫಾನ್(20) ಫಾತಿಮಾ ತಸ್ಲೀಮ(17), ಮುಹಮ್ಮದ್ ಇಸ್ಫಾಕ್(13) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇರ್ಫಾನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಂಟ್ವಾಳದವರಾದ ಇವರು ಹಲವು ವರ್ಷಗಳಿಂದ ಸಕಲೇಶಪುರದಲ್ಲಿ ನೆಲೆಸಿದ್ದು ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಶಾಂತಿಅಂಗಡಿಯ ತಾಯಿರಾರ ಮನೆಗೆ ಬರುತ್ತಿದ್ದ ಕಾರಿಗೆ ಇಂದು ಬೆಳಗ್ಗೆ ಮಾಣಿ ಸಮೀಪದ ಬುಡೋಳಿಯಲ್ಲಿ ತೈಲಾ ಸಾಗಟದ ಟ್ಯಾಂಕರ್ ಢಿಕ್ಕಿ ಹೊಡೆದಿದೆ.