ಬಸ್ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ: ಮೂವರು ಕೆಎಸ್ಸಾರ್ಟಿಸಿ ಸಿಬ್ಬಂದಿಯ ಬಂಧನ; ಕೋರ್ಟ್ಗೆ ಹಾಜರು
ಉಡುಪಿ, ಜು.10: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸರಕಾರಿ ಬಸ್ ನಲ್ಲಿ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಕೆಎಸ್ಸಾರ್ಟಿಸಿ ಸಿಬ್ಬಂದಿಯನ್ನು ಉಡುಪಿ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಯುವರಾಜ್ ಕಟ್ಟೆಕಾರ್ (45), ಚಾಲಕ ವೀರಯ್ಯ ಹಿರೇಮಠ (40), ಹೆಚ್ಚುವರಿ ಚಾಲಕ ರಾಘವೇಂದ್ರ ಬಡೆಗೇರ (43) ಎಂದು ಗುರುತಿಸಲಾಗಿದೆ.
ಕೃತ್ಯ ಎಸಗಿದ ಕೆಎಸ್ಸಾರ್ಟಿಸಿ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಣಿಪಾಲದಲ್ಲಿ ವಾಸವಾಗಿರುವ, ಮೂಲತಃ ಬೆಳಗಾವಿಯ 15ರ ಹರೆಯದ ಈ ಬಾಲಕಿ ಇತ್ತೀಚೆಗೆ ರಾಣೆಬೆನ್ನೂರಿಗೆ ಒಬ್ಬಳೇ ಹೋಗಿದ್ದಳು.
ಜು.5ರಂದು ಈ ಮೂವರು ಆರೋಪಿಗಳು ಆಕೆಯನ್ನು ರಾಣೆಬೆನ್ನೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಒಳಗೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು ಎಂದು ಹೇಳಲಾಗಿದೆ.
ಜು.8ರಂದು ಉಡುಪಿಗೆ ಆಗಮಿಸಿದ ಬಾಲಕಿ ಈ ವಿಷಯವನ್ನು ಮನೆಯವರಲ್ಲಿ ತಿಳಿಸಿದ್ದಳು. ಈ ಕುರಿತು ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ರಾಣೆಬೆನ್ನೂರಿನಲ್ಲಿ ಬಸ್ ಸಹಿತ ವಶಪಡಿಸಿಕೊಂಡು ಉಡುಪಿಗೆ ಕರೆ ತಂದಿದ್ದಾರೆ. ಇಂದು ಸಂಜೆ ಎಲ್ಲ ಮೂವರು ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.