ಎಡಪದವು: ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ
ಮಂಗಳೂರು, ಜು.11: ಯುವಕನೊಬ್ಬನ ಮೇಲೆ ಬೈಕಿನಲ್ಲಿ ಬಂದ ಇಬ್ಬರ ತಂಡ ಹಲ್ಲೆ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಜಂಕ್ಷನ್ ಬಳಿ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಕುಪ್ಪೆಪದವು ನಿವಾಸಿ ಅಹ್ಮದ್ ಬಾವ ಎಂಬವರ ಪುತ್ರ ಅಬೂಬಕರ್ ಸಿದ್ದೀಕ್(32) ಹಲ್ಲೆಗೊಳಗಾದವರು. ಕೂಲಿ ಕಾರ್ಮಿಕರಾಗಿರುವ ಅಬೂಬಕರ್ ಸಿದ್ದೀಕ್ ನಿನ್ನೆ ಮುಸ್ಸಂಜೆ 7:30ರ ಸುಮಾರಿಗೆ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರು ನಡೆದುಕೊಂಡು ಮುಂಚೂರು ವಿವೇಕಾನಂದ ಶಾಲೆ ಬಳಿ ಬರುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲೆಗೆ ಯಾವುದೋ ಆಯುಧದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರೆನ್ನಲಾಗಿದೆ.
ಗಾಯಗೊಂಡಿರುವ ಅಬೂಬಕರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story