ದ.ಕ.ಜಿಲ್ಲೆಯಲ್ಲಿ ಮತೀಯ ಶಕ್ತಿಗಳಿಂದ ಗೆರಿಲ್ಲಾ ಮಾದರಿಯ ಚಟುವಟಿಕೆ: ಸಚಿವ ರೈ
ಮಂಗಳೂರು, ಜು.13: ದ.ಕ. ಜಿಲ್ಲೆಯಲ್ಲಿ ಮತೀಯ ಶಕ್ತಿಗಳು ಗೆರಿಲ್ಲಾ ಮಾದರಿಯ ಚಟುವಟಿಕೆ ನಡೆಸುತ್ತಿದೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತೀಯ ಗಲಭೆಗಳು ಹೆಚ್ಚುತ್ತಿವೆ. ಹಿಂದೆಲ್ಲಾ 2-3 ದಿವಸಗಳಲ್ಲಿ ಗಲಭೆ ಶಾಂತವಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಮೇಲ್ನೋಟಕ್ಕೆ ಶಾಂತವಾದಂತೆ ಕಂಡುಬಂದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಜಿಲ್ಲೆಯ ಸ್ವಾಸ್ಥ್ಯವನ್ನು ಹದಗೆಡಲು ಮತೀಯ ಶಕ್ತಿಗಳಿಂದ ಕುತಂತ್ರ ನಡೆಯುತ್ತಿದೆ ಎಂದವರು ಹೇಳಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಮುಖಂಡರು, ದ.ಕ. ಜಿಲ್ಲೆಯ ಶಾಂತಿಗಾಗಿ ರೂಪಿಸಲಾಗಿದ್ದ ಪಕ್ಷಾತೀತವಾಗಿ ನಡೆಯಲಿದ್ದ ಶಾಂತಿಗಾಗಿ ಪಾದಯಾತ್ರೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ನಾಯಕರಾದ ಕುಮಾರಸ್ವಾಮಿ ಭಾಗವಹಿಸಲಿದ್ದರು. ಪಕ್ಷಾತೀತವಾಗಿ ನಡೆಯಲಿದ್ದ ಪಾದಯಾತ್ರೆಗೆ ಅನುಮತಿ ನೀಡದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಐಜಿಪಿ ಹರಿಶೇಖರನ್, ಕಮಿಷನರ್ ಟಿ.ಆರ್. ಸುರೇಶ್, ಜಿಲ್ಲಾಧಿಕಾರಿ ಡಾ.ಜಗದೀಶ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಮೇಯರ್ ಕವಿತಾ ಸನಿಲ್ ಮುಂತಾದವರು ಉಪಸ್ಥಿತರಿದ್ದರು.