ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ
ಉಡುಪಿ, ಜು.14: ಕರ್ನಾಟಕ ಸರಕಾರ ಮತ್ತು ಭಾರತ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಸರಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ಮೆರಿಟ್- ಕಂ -ಮೀನ್ಸ್ ವಿದ್ಯಾರ್ಥಿವೇತನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್ಡಿವರೆಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಆನ್ಲೈನ್ನಲ್ಲಿ -www.shcolarship.giv.in ಅರ್ಜಿಯನ್ನು ಸಲ್ಲಿಸಬಹುದು. ಹೊಸ ಅರ್ಜಿ ಸಲ್ಲಿಸಲು ಆ. 31ಹಾಗೂ ನವೀಕೃತ ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನಾಂಕವಾಗಿರುತ್ತದೆ.
ಉಡುಪಿ ಜಿಲ್ಲೆ ವ್ಯಾಪ್ತಿಗೆ ಬರುವ ಕಾಲೇಜಿನ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನವನ್ನು ಆನ್ಲೈನ್ ನಲ್ಲಿ ಸಲ್ಲಿಸಿದ ನಂತರ ಅರ್ಜಿಯನ್ನು ದ್ವಿಪ್ರತಿಯಲ್ಲಿ ಪ್ರಿಂಟ್ ಪಡೆದು ಅಂಕಪಟ್ಟಿ (ಹಿಂದಿನ ಎರಡೂ ಸೆಮಿಸ್ಟರ್/ವಾರ್ಷಿಕ ಹಾಗೂ ಹಿಂದಿನ ಕೋರ್ಸ್ ಅಂಕಪಟ್ಟಿ), ಪ್ರಸಕ್ತ ಸಾಲಿನ ಶುಲ್ಕ ಪಾವತಿಯ ರಶೀದಿ ಪ್ರತಿ, ಸಂಸ್ಥೆಯ ಪರಿಶೀಲನಾ ಪ್ರತಿ, ಸ್ವಯಂ ಘೋಷಿತ ಜಾತಿ ಹಾಗೂ ಸ್ವಯಂ ಘೋಷಿತ ಆದಾಯದ ಪ್ರತಿ, ವಿದ್ಯಾರ್ಥಿಯ ಬ್ಯಾಂಕ್ ಪಾಸ್ಪುಸ್ತಕದ ಪ್ರತಿ, ಆಧಾರ್ ಕಾರ್ಡ್ನ ಪ್ರತಿ, ಪಾಸ್ಪೋರ್ಟ್ ಸೈಜಿನ 2 ಭಾವಚಿತ್ರದೊಂದಿಗೆ ಒಂದು ಪ್ರತಿಯನ್ನು ಕಾಲೇಜಿಗೆ ಸಲ್ಲಿಸಬೇಕು. ಅಲ್ಲದೇ ಒಂದು ಪ್ರತಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್ಸೈಟ್-www.gokdom.kar.nic.in -ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕೊಠಡಿ ಸಂಖ್ಯೆ ಬಿ307, ಬಿ ಬ್ಲಾಕ್ 2ನೇ ಮಹಡಿ, ‘ರಜತಾದ್ರಿ’ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ (ದೂರವಾಣಿ:0820-2574596) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.