1 ತಿಂಗಳೊಳಗೆ ಪಡಿತರ ಚೀಟಿ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಖಾದರ್
ಮಂಗಳೂರು, ಜು. 15: ನೂತನ ಪಡಿತರ ಚೀಟಿ ಮಾಡಿಕೊಳ್ಳುವವರು ಎದುರಿಸಬೇಕಾಗಿದ್ದ ಅಡಚಣೆಗಳನ್ನು ನಿವಾರಿಸಲಾಗಿದ್ದು, ರಾಜ್ಯದಲ್ಲಿ 14,70,000 ಹೊಸ ಅರ್ಜಿದಾರರಿಗೆ ಒಂದು ತಿಂಗಳೊಳಗೆ ಪಡಿತರ ಚೀಟಿ ಲಭ್ಯವಾಗುವ ಮೂಲಕ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಲ್ಲಾ ಅರ್ಜಿಗಳನ್ನು ಚೆಕ್ಲಿಸ್ಟ್ ಮಾಡಿಕೊಂಡು ಆ ಪ್ರದೇಶದ ಜನಸ್ನೇಹಿ ಕೇಂದ್ರಕ್ಕೆ ವೆಬ್ಸೈಟ್ ಮೂಲಕ ಕಳುಹಿಸಲಾಗುತ್ತದೆ. ಅಲ್ಲಿ ಗ್ರಾಮಕರಣಿಕರು ಅವುಗಳ ಪರಿಶೀಲನೆ ನಡೆಸಿ ಅಂತಿಮಗೊಳಿಸಿ ಆ ಬಳಿಕ ಪ್ರಿಂಟಿಂಗ್ ಕಾರ್ಯ ನಡೆಯಲಿದೆ. ಗ್ರಾಮವೊಂದರಲ್ಲಿ ಗರಿಷ್ಠ 150ರಷ್ಟು ಪಡಿತರ ಚೀಟಿಗಳ ಪರಿಶೀಲನೆ ಮಾತ್ರವೇ ಇರುವುದರಿಂದ ಈ ಬಗ್ಗೆ ಗ್ರಾಮಕರಣಿಕರು ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಲಿದ್ದಾರೆ.
ಮುಖ್ಯವಾಗಿ ಅರ್ಜಿದಾರರ ಆಧಾರ್ ಸಂಖ್ಯೆ, ಕುಟುಂಬ ನಕ್ಷೆ ಹಾಗೂ ವಾರ್ಷಿಕ 1,20,000 ರೂ. ಆದಾಯವನ್ನು ಪರಿಗಣಿಸಿ ಅರ್ಜಿಯನ್ನು ಅಂತಿಮಗೊಳಿಸಲಾಗುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಕೂಡಾ ಸಹಕಾರ ನೀಡಬೇಕು ಎಂದು ಸಚಿವ ಖಾದರ್ ಸಲಹೆ ನೀಡಿದರು.