ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನ
ಪುತ್ತೂರು, ಜು. 22: ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಾಟಾಜೆ ಕಾಲನಿಯ ನಿವಾಸಿ ಚೌರ ಎಂಬವರ ಪುತ್ರ ಆನಂದ (23) ಬಂಧಿತ ಆರೋಪಿ.
ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಅತ್ಯಾಚಾರ ನಡೆಸಿದ್ದು, ಇದರ ಪರಿಣಾಮವಾಗಿ ಆಕೆ ಇದೀಗ ಏಳು ತಿಂಗಳ ಗರ್ಭೀಣಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿ ಕಳೆದ ಜು.7ರಂದು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿತ್ತು. ಈ ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಪುತ್ತೂರು ನಗರ ಪೊಲೀಸರು ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.
ಪುತ್ತೂರು ನಗರ ಠಾಣೆಯ ಎಸ್ಐ ಓಮನಾ ಅವರ ನೇತೃತ್ವದಲ್ಲಿ ಎಎಸ್ಐ ಚಿದಾನಂದ ರೈ, ಹೆಡ್ಕಾನ್ಸ್ಟೇಬಲ್ಗಳಾದ ಸ್ಕರಿಯಾ, ಕೃಷ್ಣಪ್ಪ ಮತ್ತು ಕಾನ್ಸ್ಟೇಬಲ್ ಪ್ರಶಾಂತ್ ರೈ ತಂಡ ಆರೋಪಿಯನ್ನು ಬೆಳ್ಳಾರೆ ಬಸ್ ನಿಲ್ದಾಣದ ಬಳಿ ಶನಿವಾರ ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.