ರಾಜಕಾರಣಿಗಳಿಗೆ ಸಿಗುವ ಸ್ಥಾನಮಾನ ವಿಜ್ಞಾನಿಗಳಿಗಿಲ್ಲ: ಪೇಜಾವರ ಶ್ರೀ
ಉಡುಪಿ, ಜು.26: ಈ ದೇಶದಲ್ಲಿ ರಾಜಕಾರಣಿಗಳಿಗೆ ನೀಡುವ ಸ್ಥಾನ ಮಾನ ವಿಜ್ಞಾನಿಗಳಿಗೆ ನೀಡುತ್ತಿಲ್ಲ. ವಿಜ್ಞಾನಿಗಳ ಕೊಡುಗೆ ಎಂದಿಗೂ ಶಾಶ್ವತ ವಾಗಿರುತ್ತದೆ. ಆದರೆ ಅವರ ಬಗ್ಗೆ ಜನರಿಗೆ ಹೆಚ್ಚಿನ ಜ್ಞಾನವೇ ಇರುವುದಿಲ್ಲ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಖೇಧ ವ್ಯಕ್ತಪಡಿ ಸಿದ್ದಾರೆ.
ಇತ್ತೀಚೆಗೆ ಅಗಲಿದ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ಆಯೋಜಿಸಲಾದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಮಾತನಾಡಿ, ಯು.ಆರ್.ರಾವ್. 40 ವರ್ಷಗಳ ಕಾಲ ಇಸ್ರೋವನ್ನು ಕಟ್ಟಿ ಬೆಳೆಸಿದರು. ಹಾಗಾಗಿ ಇಸ್ರೋ ಅಂದರೆ ಯು.ಆರ್.ರಾವ್ ಎಂಬುದಾಗಿದೆ. ಇಡೀ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜಮುಖಿ ಆಗಿರಬೇಕೆಂದು ಕನಸು ಕಂಡ ಕನಸುಗಾರ ಅವರು ಎಂದು ಹೇಳಿದರು.
ಹಿರಿಯ ವಿಜ್ಞಾನಿ ಎ.ಆರ್.ಉಪಾಧ್ಯಾಯ ಮಾತನಾಡಿ, ಯು.ಆರ್.ರಾವ್ ಯುವ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಅವರಿಗೆ ಮುಂಚೂ ಣಿಗೆ ಬರಲು ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದರು. ಇಸ್ರೋ ಸಂಸ್ಥೆ ಬೆಳೆಯಲು ಇವರ ಕೊಡುಗೆ ಅಪಾರ ಎಂದು ತಿಳಿಸಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಾಗಕಟ್ಟೆ ಶ್ರೀ ಪ್ರಜ್ಞಾತ್ಮ ತೀರ್ಥ ಸ್ವಾಮೀಜಿ, ಕೆನರಾ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ನಾರಾಯಣ ಶಾನುಭಾಗ್ ಉಪಸ್ಥಿತರಿದ್ದರು. ಉಡುಪಿ ಸುಸಿ ಗ್ಲೋಬಲ್ ಸೆಂಟರ್ನ ನಿರ್ದೇಶಕ ವಿಜಯ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.