ನಿರಾಶ್ರಿತರಿಗೆ ದಾರಿ ನೀಡುವ ಕೆಲಸ ನಮ್ಮಿಂದಾಗಬೇಕು: ಶಾಸಕ ಮೊಯ್ದಿನ್ ಬಾವಾ
ಮಂಗಳೂರು, ಆ. 8: ಮಹಿಳೆಯರು, ನಿರಾಶ್ರಿತರಿಗೆ, ಸಂತ್ರಸ್ತರಿಗೆ ದಾರಿ ನೀಡುವ ಕೆಲಸ ನಮ್ಮಿಂದಾಗಬೇಕು. ಮಹಿಳಾ ಜಾಗೃತ ಸಂಘ ಕಲ್ಪ ಟ್ರಸ್ಟ್ ನ ಸಮಾಜಮುಖಿ ಚಿಂತನೆ ಮೆಚ್ಚುವಂತಹದ್ದು, ಒಬ್ಬ ಮಹಿಳೆ ಮುಂದೆ ಬಂದಲ್ಲಿ ಸಮಾಜ ಅಭಿವೃದ್ಧಿ ಆಗಲಿಕ್ಕೆ ಸಾಧ್ಯವಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ಮಹಿಳಾ ಜಾಗೃತ ಸಂಘ , ರೇಂಜರ್ಸ್ ಘಟಕ ಹಾಗೂ ಕಲ್ಪ ಟ್ರಸ್ಟ್ ಸಹಯೋಗದೊಂದಿಗೆ ಸುರತ್ಕಲ್ ಶಾಸಕರ ಕಚೇರಿಯಲ್ಲಿ ನಡೆದ ಸ್ವ ಉದ್ಯೋಗಕ್ಕೆ ಸಹಕಾರ ನೀಡುವ ಕಾರ್ಯಕ್ರಮ ಹಾಗೂ ಬಡವರಿಗೆ ಸಾಲ ಸೌಲಭ್ಯ ನೀಡುವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಬಾವಾ ಮಾತನಾಡಿದರು.
ಅನೇಕ ಸಮಾಜಮುಖಿ ಕೆಲಸ ಮಾಡಿರುವ ಬ್ಯಾಂಕ್ ಪ್ರಬಂಧಕ ರವಿಚಂದ್ರ ಅವರಿಗೆ ಸನ್ಮಾನಿಸಲಾಯಿತು. ಅಲ್ಲದೆ ಸಂತ್ರಸ್ತೆ ಮಹಿಳೆ ಸೌಮ್ಯ ಅವರಿಗೆ ಟೈಲರಿಂಗ್ ಯಂತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಕಾವೂರು ಪ್ರಥವು ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಸ್.ತಾರಾ, ಕಂದಾಯ ಅಧಿಕಾರಿ ಎಸ್.ನವೀನ್, ಕೆ.ಹಷರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ಪ್ರಮೀಳಾ ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದ್ದು, ನಾಗರತ್ನ ವಂದಿಸಿದರು.