‘ಆಟಿದ ಕೂಟ’ ಮತ್ತು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ
ಬಂಟ್ವಾಳ,ಆ.12: ಗ್ರಾಮೀಣ ಭಾಗವಾದ ಸಿದ್ದಕಟ್ಟೆಯಲ್ಲಿ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿರುವುದು ಇಲ್ಲಿನ ಕೀರ್ತಿಯ ಮುಕುಟಕಿಟ್ಟ ಗರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು
ಸರಕಾರಿ ಪ್ರೌಢ ಶಾಲೆ ಸಿದ್ದಕಟ್ಟೆ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿದ್ದಕಟ್ಟೆ ವಲಯದ ವತಿಯಿಂದ ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಆಟಿದ ಕೂಟ ಮತ್ತು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅರಣ್ಯಗಳ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಅರಣ್ಯ ಸಂರಕ್ಷಣ ಕಾಯ್ದೆ ಯಿಂದ ಅರಣ್ಯ ರಕ್ಷಣೆ ಸಾಧ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ವನಗಳು, ವನ್ಯಜೀವಿಗಳನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಎಂದರು.
ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷರಾಗಿ ದಿನೇಶ್ ಸುಂದರ ಶಾಂತಿ, ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಕಲಶಕ್ಕೆ ಭತ್ತ ಸುರಿದರು. ಕಸಾಪ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ಆಟಿ ಆಚರಣೆಯ ಮಹತ್ವ ತಿಳಿಸಿಕೊಟ್ಟರು. ಎಸ್ಡಿಎಂಸಿ ಅಧ್ಯಕ್ಷ ಸೀತಾರಾಮ ಶಾಂತಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಮೋಹನ್ ರಾವ್, ತಾ. ಪಂ. ಮಾಜಿ ಸದಸ್ಯ ಅರ್ಕಕೀರ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಕೋಶಾಧಿಕಾರಿ ಡಾ.ಸುದೀಪ್ ಕುಮಾರ್, ಉದ್ಯಮಿ ನಿತ್ಯಾನಂದ ಕೆಂತಲೆ, ಕ್ಷೇತ್ರ ಸಂಪನ್ಮೂಲಾಧಿಕಾರಿ ರಾಜೇಶ್, ಶಿಕ್ಷಣ ಸಂಯೋಜಕಿಯರಾದ ಸುಜಾತ, ಪುಷ್ಪ, ಶ್ರೀ.ಕ್ಷೇ. ಧ.ಗ್ರಾ. ಯೋಜನೆಯ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ವೇದಿಕೆಯಲ್ಲಿದ್ದರು.
ಅಪ್ಪಿ ಪಾಡ್ದನ ಹಾಡಿದರು. ನಾಟಿ ವೈದ್ಯ ವಾಸು ಪೂಜಾರಿ, ಹಾಗೂ ಪ್ರಸಿದ್ದ ಸ್ಮರಣ ಸಂಚಿಕೆಯ ಸಂಪಾದಕಿ ಮಮತಾ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲೆಯ ಶಿಕ್ಷಕಿ ಮಾರ್ಗರೇಟ್ ಸ್ವಾಗತಿಸಿದರು, ಉಪಪ್ರಾಂಶುಪಾಲ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಸೇವಾಪ್ರತಿನಿಧಿ ಯಶೋಧರ ವಂದಿಸಿದರು. ಮಹೇಶ್ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.