ಚಾರ: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ವಿರುದ್ಧ ಧರಣಿ
ಹೆಬ್ರಿ, ಆ.17: ಚಾರ ಗ್ರಾಪಂ ವ್ಯಾಪ್ತಿಯ ಹುತ್ತುರ್ಕೆಯ 105 ಸರ್ವೆ ನಂಬರ್ನಲ್ಲಿ ಪಂಚಾಯತ್ನ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಅಕ್ರಮ ವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವುದಾಗಿ ಆರೋಪಿಸಿ ಅದೇ ಗ್ರಾಪಂನ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಗುರುವಾರ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿದರು.
ಪಂಚಾಯತ್ ಕಚೇರಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ನಡೆಯುತ್ತಿರುವ ಈ ಗಣಿಗಾರಿಕೆ ಬಗ್ಗೆ ಪಂಚಾಯತ್ ಗ್ರಾಮ ಕರಣಿಕರು, ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಮುಲಾಜಿಲ್ಲದೆ ಮುಂದುವರಿಸಲಾಗುತ್ತಿದೆ. ಇದು ಸರಕಾರಿ ಸ್ಥಳವಾಗಿದ್ದು, ಗೋಮಾಳ ಹಾಗೂ ಗೇರು ಬೀಜ ತೋಟವಾಗಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡ ರಾಘವೇಂದ್ರ ಡಿ.ಜಿ. ಆರೋಪಿಸಿದ್ದಾರೆ.
ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ ಮಾತನಾಡಿ, ಚಾರ ಗ್ರಾಪಂ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ಗಣಿಗಾರಿಕೆಗೆ ಅವಕಾಶ ಇರು ವುದಿಲ್ಲ. ಆದುದರಿಂದ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಜರಗಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಕುಸುಮಾ ಪ್ರಭು, ಸುರೇಶ್, ಸಮಲತಾ, ಪ್ರವೀಣ್ ಪೂಜಾರಿ, ಸ್ಥಳೀಯ ಮುಖಂಡರಾದ ಮಿಥುನ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಕಾರ್ಕಳ ತಾಲೂಕು ಅಧ್ಯಕ್ಷ ಸಂಜೀವ ಶೆಟ್ಟಿ, ವಿಷ್ಣುಮೂರ್ತಿ ಪ್ರಭು ಚಾರ ಮೊದಲಾದ ವರು ಉಪಸ್ಥಿತರಿದ್ದರು.